KUNDAPURA | ಕೋಟೇಶ್ವರದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ
ಕುಂದಾಪುರ: ಕೋಟೇಶ್ವರ ಪಂಚಾಯತ್ ಗೆ ಸೇರಿದ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾದ ಘಟನೆ ರವಿವಾರ ನಸುಕಿನ ವೇಳೆ ಕೋಟೇಶ್ವರದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಹಿಂಬದಿಯಲ್ಲಿ (ಹಳೆ ಗ್ರಾಪಂ ಕಟ್ಟಡ) ಕಳೆದ ನಾಲ್ಕೈದು ವರ್ಷಗಳಿಂದ ಎಸ್.ಎಲ್.ಆರ್.ಎಂ. ಘಟಕ ಕಾರ್ಯಾಚರಿಸುತ್ತಿದ್ದು ಇದರ ಕೆಳಭಾಗ, ಆಸುಪಾಸಿನಲ್ಲಿ ವಾಣಿಜ್ಯ ಕಟ್ಟಡಗಳಿವೆ. ಮೇಲ್ಭಾಗದಲ್ಲಿ ಒಣತ್ಯಾಜ್ಯ ಘಟಕವಿದ್ದು, ಅಲ್ಲಿ ಶೇಖರಿಸಿಟ್ಟಿದ್ದ ಒಣ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗುಲಿ ಒಣ ತ್ಯಾಜ್ಯಗಳು, ಯಂತ್ರೋಪಕರಣ, ತಗಡಿನ ಶೀಟುಗಳು ಬೆಂಕಿಗಾಹುತಿಯಾಗಿವೆ. ವಾಣಿಜ್ಯ ಸಂಕಿರ್ಣದ ಕಟ್ಟಡದಲ್ಲಿದ್ದ ತರಕಾರಿ ಅಂಗಡಿ ಸಹಿತ ಒಂದಷ್ಟು ಅಂಗಡಿಗಳ ಸಾಮಗ್ರಿಗಳಿಗೆ ಹಾನಿಯಾಗಿವೆ.
ಬೆಳಗ್ಗೆ ಅಯ್ಯಪ್ಪ ವ್ರತಧಾರಿಗಳು ಬೆಂಕಿ ಕಂಡು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕಕ್ಕೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿ ಕುಂದಾಪುರ ಹಾಗೂ ಬೈಂದೂರು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.