ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
ಕುಂದಾಪುರ : ಜಿಲ್ಲೆಯ ಹಿರಿಯ ರಾಜಕೀಯ ಧುರೀಣ, ಬೈಂದೂರಿನ ಮಾಜಿ ಶಾಸಕ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ (91) ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೆಗ್ಡೆ ಅವರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
1935ರ ಡಿ.24ರಂದು ಬಸ್ರೂರಿನಲ್ಲಿ ಜನಿಸಿದ ಇವರು 1983-85ರ ಅವಧಿಗೆ ಜನತಾಪಕ್ಷದ ಶಾಸಕರಾಗಿ ಬೈಂದೂರು ಕ್ಷೇತ್ರದಿಂದ ಆಯ್ಕೆಯಾ ಗಿದ್ದರು. ಬಳಿಕ ಇವರು 1988-94ರ ಅವಧಿಯಲ್ಲಿ ರಾಜ್ಯ ವಿಧಾನ ಪರಿಷತ್ನಲ್ಲಿ ಜನತಾ ದಳದ ಸದಸ್ಯರಾಗಿ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸಿದ್ದರು.
1960ರಲ್ಲಿ ಬಸ್ರೂರು ಗ್ರಾಮಪಂಚಾಯತ್ ಸದಸ್ಯರಾಗಿ ಸಾರ್ವಜನಿಕ ಸೇವೆಗೆ ಇಳಿದ ಹೆಗ್ಡೆ ಅವರು 1968ರವರೆಗೆ ಸದಸ್ಯರಾಗಿ ಬಳಿಕ 68ರಿಂದ 83ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಬೈಂದೂರು ಶಾಸಕರಾಗಿ ಆಯ್ಕೆಯಾದ ಅವರು 94ರವರೆಗೆ ರಾಜ್ಯಮಟ್ಟದಲ್ಲಿ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಕುಂದಾಪುರ ತಾಲೂಕಿನ ಪ್ರಮುಖ ರಾಜಕೀಯ ನೇತಾರರಾಗಿ, ಸಹಕಾರಿ ಧುರೀಣರಾಗಿ ಗುರುತಿಸಿಕೊಂಡಿದ್ದ ಇವರು ತಾಲೂಕು ಅಭಿವೃದ್ಧಿ ಮಂಡಳಿ, ಎಪಿಎಂಸಿ ಅಲ್ಲದೇ ಬಸ್ರೂರಿನ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಸುದೀರ್ಘ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮೊನ್ನೆ ಮೊನ್ನೆ ಯವರೆಗೂ ಜನರ ನಡುವೆ ಸಕ್ರೀಯರಾಗಿದ್ದರು.
ಧಾರ್ಮಿಕ ಮುಂದಾಳವಾಗಿ ಅಪ್ಪಣ್ಣ ಹೆಗ್ಡೆ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾಗಿ 1966ರಿಂದ 77ರವರೆಗೆ ಸೇವೆ ಸಲ್ಲಿಸಿದ್ದರಲ್ಲದೇ ಸುದೀರ್ಘ ಕಾಲ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸಂತಾಪ: ಜಿಲ್ಲೆಯ ಹಿರಿಯ ರಾಜಕೀಯ ಧುರೀಣರಾಗಿದ್ದ ಅಪ್ಪಣ್ಣ ಹೆಗ್ಡೆ ಅವರ ನಿಧನಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಂತಾಪ ವ್ಯಕ್ತಪಡಿಸಿದ್ದಾರೆ.