ಗುಣಮಟ್ಟದ ಕೆಲಸದಿಂದ ಗುರಿ ಸಾಧನೆ ಸಾಧ್ಯ: ಡಾ.ವಿಜಯ ಬಲ್ಲಾಳ್
35ನೇ ಮದ್ಯವ್ಯಸನ ವಿಮುಕ್ತಿ -ವಸತಿ ಶಿಬಿರ ಸಮಾರೋಪ
ಉಡುಪಿ, ಜ.10: ದುಶ್ಚಟಗಳಿಂದ ದೂರ ಇರುವ ಮೂಲಕ ಬದ್ಧತೆ, ಗುಣಮಟ್ಟದ ಕೆಲಸದಿಂದ ಗುರಿ ಸಾಧನೆ ಮಾಡಬೇಕು. ಅದರೊಂದಿಗೆ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ನೆಲೆಯಲ್ಲೂ ಬೆಳೆಯಬೇಕು ಎಂದು ಅಂಬಲಪಾಡಿ ಶ್ರೀೀಜನಾರ್ದನ ಮತ್ತು ಶ್ರೀಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ಎನ್.ಬಿ.ವಿಜಯ್ ಬಲ್ಲಾಳ್ ಹೇಳಿದ್ದಾರೆ.
ಋಮುಂಬಯಿ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ ಎ. ಬಾಳಿಗಾ ಸಭಾಂಗಣದಲ್ಲಿ ಶನಿವಾರ ನಡೆದ 10 ದಿನಗಳ 35ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ 10ದಿನಗಳ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಮಾತನಾಡಿ, ಮದ್ಯ ತೊರೆದವರು ಹಸಿವು, ಸಿಟ್ಟು, ಏಕಾಂಗಿತನ, ಸುಸ್ತು ಸಂದರ್ಭ ಸಾಕಷ್ಟು ಜಾಗರೂಕತೆ ವಹಿಸಬೇಕು. ಮನೆ ಮಂದಿ ಅವರನ್ನು ಜವಾಬ್ದಾರಿವಾಗಿ ಅರಿತುಕೊಳ್ಳಬೇಕು ಮತ್ತು ಎಚ್ಚರ ವಹಿಸಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ, ಡಾ.ದೀಪಕ್ ಮಲ್ಯ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಖಜಾಂಚಿ ಡಾ.ಸನತ್ ರಾವ್, ಸ್ನಾತಕೋತ್ತರ ವೈದ್ಯೆ ಡಾ.ಪೌಷಾಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನೋವೈದ್ಯ ಡಾ.ಮಾನಸ್ ಇ.ಆರ್. ಸ್ವಾಗತಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ವರದಿ ವಾಚಿಸಿದರು. ಮನಶಾಸ್ತ್ರಜ್ಞ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ವಂದಿಸಿದರು.