ಉದ್ಯೋಗ ಮೇಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ: ಪ್ರಭಾಕರ್ ಪೂಜಾರಿ
ಉಡುಪಿ: ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿಇದ್ದು ಪ್ರತಿ ವರ್ಷ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿ ಉನ್ನತ ಹುದ್ದೆಗಳ ಆಕಾಂಕ್ಷೆಯೊಂದಿಗೆ ದೇಶ ವಿದೇಶಗಳಿಗೆ ತೆರಳುತ್ತಿದ್ದಾರೆ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಹಾಗೂ ಅಂತಹ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳುವ ಮಹತ್ವಕಾಂಕ್ಷೆಯೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಹೇಳಿದ್ದಾರೆ.
ಉಡುಪಿ ನಗರಸಭೆ, ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್, ಬನ್ನಂಜೆ ಬಿಲ್ಲವ ಸೇವಾ ಸಂಘದ ಸಹಕಾರದಲ್ಲಿ ಉನ್ನತಿ(2.0)-2025 ಪರಿಕಲ್ಪನೆಯಲ್ಲಿ ಮಂಗಳವಾರ ಉಡುಪಿ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ್ ಜಿ.ಕಲ್ಮಾಡಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಸ್ಥಳೀಯ ನಗರಸಭಾ ಸದಸ್ಯೆ ಸವಿತಾ ಹರೀಶರಾಮ್, ಮೇಳದ ಸಂಯೋಜಕರು ಗಳಾದ ಓಬ ಪೂಜಾರಿ, ಪ್ರಮೋದ್ ಕರ್ಕೇರಾ, ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ಭಾಸ್ಕರ್ ಸುವರ್ಣ, ಉಡುಪಿಯ ಉದ್ಯಮಿ ದಿನೇಶ್ ಅಮೀನ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ನಗರಸಭೆಯ ಅಧಿಕಾರಿಗಳಾದ ನಾರಾಯಣ್ ಎಸ್.ಎಸ್., ಮನೋಹರ್, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.
ಆತ್ಮಾನಂದ ಸಂಸ್ಥೆಯ ಪ್ರಾಚಾರ್ಯ ರೂಪೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯೋಗ ಮೇಳದಲ್ಲಿ ಸುಮಾರು 60 ಕಂಪನಿಗಳು ಹಾಗೂ ಎರಡು ಸಾವಿರಕ್ಕೂ ಮಿಕ್ಕಿ ಉದ್ಯೋಗಕಾಂಕ್ಷಿಗಳು ಭಾಗವಹಿಸಿ, ಶೇ.70 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ನಿಯುಕ್ತಿ ಹೊಂದಿದರು.