ಕಾರ್ಕಳದಲ್ಲಿ ಗೀತಾಂತರಂಗ ತಿಂಗಳ ತಿರುಳು: ಭಗವದ್ಗೀತೆ ಉಪನ್ಯಾಸಕ್ಕೆ ಚಾಲನೆ
ಕಾರ್ಕಳ: ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಕಳ, ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ, ಅಮಿತ್ ಎಸ್. ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರ್ವಾಜೆ ಹಾಗೂ ಶ್ರೀ ಭಗವದ್ಗೀತಾ ಮಿತ್ರ ವೃಂದ ಶಿವತಿಕೆರೆ–ಹಿರಿಯಂಗಡಿ ಇವರ ಸಹಯೋಗದಲ್ಲಿ ಶ್ರೀಮದ್ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ಸರಣಿ ಪ್ರವಚನ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು.
ಹಿರಿಯಂಗಡಿ ಶಿವತಿಕೆರೆಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಭಗವದ್ಗೀತೆಯ ಹನ್ನೆರಡನೇ ಅಧ್ಯಾಯದ ಸಾಮೂಹಿಕ ಪಠಣ ನಡೆಯಿತು. ಬಳಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ನಾಯಕ್ ದೀಪ ಪ್ರಜ್ವಲನೆ ನೆರವೇರಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ಅವರು ಗೀತೆಯ ಮೊದಲ ಅಧ್ಯಾಯ ‘ಅರ್ಜುನ ವಿಷಾದ ಯೋಗ’ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಮೊಕ್ತೇಸರರಾದ ಸಂಜೀವ ದೇವಾಡಿಗ, ಸುದರ್ಶನ ಭಂಡಾರಿ, ಗುರುಪ್ರಸಾದ್ ರಾವ್, ಜಯಂತಿ ದೇವಾಡಿಗ ಹಾಗೂ ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ದೇವಾಡಿಗ ಉಪಸ್ಥಿತರಿದ್ದರು. ಅರುಣಾ ದಿನೇಶ್ ಕಾರ್ಯಕ್ರಮ ನಿರೂಪಿಸಿ, ದೀಪಾ ದೇವಾಡಿಗ ಸ್ವಾಗತಿಸಿದರು. ಕು. ಸ್ವಸ್ತಿ ಪ್ರಾರ್ಥಿಸಿದರು. ಗೀತಾ ಅಭಿಯಾನದ ಸಂಘಟಕ ಸಂಜಯ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ನವೀನ್ ಪೈ ಸಹಕರಿಸಿದರು.