ಅಪಘಾತದಲ್ಲಿ ಗಾಯಗೊಂಡ ಮಗುವನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು!
ಕುಂದಾಪುರ, ಜ.7: ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆಯ ಜಾಡಿ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದ ಅಪಘಾತ ದಲ್ಲಿ ಗಂಭೀರವಾಗಿ ಗಾಯಗೊಂಡ ಮಗುವನ್ನು ಪೊಲೀಸ್ ಇಲಾಖೆಯ ವಾಹನದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಹೆಮ್ಮಾಡಿಯಿಂದ ಕೊಲ್ಲೂರು ಕಡೆ ಹೋಗುತ್ತಿದ್ದ ಕಾರು ಹಾಗೂ ನೆಂಪು ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದಂಪತಿ ಹಾಗೂ ಪುಟ್ಟ ಮಗುವಿದ್ದ ಬೈಕ್ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ವೇಳೆ ಅನತಿ ದೂರದಲ್ಲಿ ಗಸ್ತಿನಲ್ಲಿದ್ದ ಹೈವೇ ಪಟ್ರೋಲ್ ವಾಹನ ಸ್ಥಳಕ್ಕೆ ಆಗಮಿಸಿತು. ಬೈಕಿನಿಂದಬಿದ್ದವರನ್ನು ಪ್ರಾಥಮಿಕವಾಗಿ ಉಪಚರಿಸಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಹೆಣ್ಣು ಮಗುವನ್ನು ವಾಹನದ ಚಾಲಕ ರಾಮ ಹಾಗೂ ಸಿಬ್ಬಂದಿ ಕಿರಣ್ ಬಿ. ಪಾಟೀಲ್, ತಮ್ಮ ಇಲಾಖಾ ವಾಹನದಲ್ಲಿ ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ದಂಪತಿಯನ್ನು ಸ್ಥಳೀಯ ವಾಹನದವರು ಆಸ್ಪತ್ರೆಗೆ ಕರೆದೊಯ್ದು ಮೂವರಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.