ಕಾರ್ಕಳ | ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಾರ್ಕಳ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಕಳದ ಬಿಲ್ಲವ ಸಂಘದ ನಾರಾಯಣಗುರು ಸಭಾಭವನದಲ್ಲಿ ಮೂಡುಬಿದಿರೆ ಆಳ್ವಾಸ್ ಸಮೂಹ ಸಂಸ್ಥೆ, ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಉಡುಪಿ, ನೋವಾ ಐವಿಎಎಪ್ ಪರ್ಟಿಲಿಟಿ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಆಳ್ವಾಸ್ ಸಂಸ್ಥೆಯ ತಜ್ಙ ವೈದ್ಯರಾದ ಡಾ.ಹನಾ ಶೆಟ್ಟಿಯವರು ಉದ್ಘಾಟಿಸಿ, ಸಂವಾದ ಕಾರ್ಯಕ್ರಮವನ್ನು ನಡೆಸಿ ಸಭಿಕರ ಪ್ರಶ್ನೋತ್ತರಗಳಿಗೆ ಉತ್ತರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು ಮಾತನಾಡಿ, ಒತ್ತಡಗಳ ಜೀವನ ಶೈಲಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ, ಇಂತಾ ಆರೋಗ್ಯ ಶಿಬಿರಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು.
ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರು ಮಾತನಾಡಿ, ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಬಡ ಜನತೆ, ಮಹಿಳೆಯರ ಪರವಾದ ಅವರ ಕಾಳಜಿಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ, ಅವರ ಹೆಸರಿನಲ್ಲಿ ನಡೆಯುತ್ತಿರುವ ಇಂದಿನ ಆರೋಗ್ಯ ಶಿಬಿರವು ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜ್ಯೋತಿ ಹೆಬ್ಬಾರ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ ಮಾತನಾಡಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ಶಿಬಿರದಲ್ಲಿ 200ಕ್ಕೂ ಹೆಚ್ವು ಸಾರ್ವಜನಿಕರು ವಿವಿಧ ಆರೋಗ್ಯ ತಪಾಸಣೆಯನ್ನು ನಡೆಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ನಿಟ್ಟೆ ಗ್ರಾಮದ ಸವಿತಾ ಅವರಿಗೆ ಆರೋಗ್ಯ ಸಂಬಂದಿ ಸಹಾಯ ಧನವನ್ನು ಉದಯ ಶೆಟ್ಟಿ ಮುನಿಯಾಲು ಅವರು ವಿತರಿಸಿದರು. ಗ್ರಾಮೀಣ ಸಮಿತಿಯ ಮಹಿಳಾ ಅಧ್ಯಕ್ಷರುಗಳನ್ನು ವೇದಿಕೆ ಆಹ್ವಾನಿಸಿ ಹೂವನ್ನಿತ್ತು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅದ್ಯಕ್ಷ ರಾಜೇಂದ್ರ ದೇವಾಡಿಗ, ಆಳ್ವಾಸ್ ಸಂಸ್ಥೆಯ ಭಾಸ್ಕರ್ ಪೂಜಾರಿ, ಡಾ. ಶವೀಝ್ ಪೈಜಿ, ಪ್ರಸಾದ್ ನೇತ್ರಾಲಯದ ಡಾ. ಕ್ರೀನಾ, ಮಾಲಿನಿ ರೈ, ಎಸ್.ಸಿ ಘಟಕದ ದೇವದಾಸ್, ರಾಜ್ಯ ಮಹಿಳಾ ಕಾರ್ಯದರ್ಶಿ ಅನಿತಾ ಡಿಸೋಜ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ರೀನಾ ಡಿಸೋಜ ಧನ್ಯವಾದವಿತ್ತರು.