ನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿಸಿ: ಮನು ಹಂದಾಡಿ

ಜ್ಯೋತಿ ಸಾಲಿಗ್ರಾಮಗೆ ಪಂಚವರ್ಣ ಆಸಾಡಿ ಒಡ್ರ್ ಪುರಸ್ಕಾರ ಪ್ರದಾನ

Update: 2026-08-09 20:37 IST

ಕೋಟ, ಆ.9: ಪ್ರತಿಯೊಬ್ಬರೂ ತಮ್ಮ ನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿ ಮಾಡಿಕೊಂಡಾಗ ಮನಸ್ಸಿನ ಮಾತುಗಳಿಗೆ ನ್ಯಾಯಯುತ ಮೌಲ್ಯಗಳು ದೊರೆಯುತ್ತವೆ. ಅದೇ ರೀತಿ ಕುಂದಾಪ್ರ ಕನ್ನಡ ಭಾಷೆ ಗ್ರಾಮೀಣ ಭಾಗದ ಒಂದು ಸುಂದರ ಭಾಷೆಯಾಗಿ ಜಗತ್ತಿನಾದ್ಯಂತ ಮಿಂಚುತ್ತಿದೆ. ಕುಂದಾಪ್ರ ಕನ್ನಡ ಅದೊಂದು ವಿಶಿಷ್ಟ ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆ ಎಂದು ಕುಂದಗನ್ನಡದ ರಾಯಭಾರಿ ಮನು ಹಂದಾಡಿ ಹೇಳಿದ್ದಾರೆ.

ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ರವಿವಾರ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಕಾರದೊಂದಿಗೆ 5ನೇ ವರ್ಷದ ಕುಂದಾಪ್ರ ಭಾಷೆ ಬದ್ಕಿನ ಆಸಾಡಿ ಒಡ್ರ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್ ಹಾಗೂ ಪ್ರವರ್ತಕ ಆನಂದ್ ಸಿ.ಕುಂದರ್ ಉದ್ಘಾಟಿಸಿದರು. ಇದೇ ವೇಳೆ ಕುಂದಾಪ್ರ ರೇಡಿಯೋ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಇವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಕೃಷ್ಣ ಪ್ರಸಾದ್ ಫೌಂಡೇಶನ್ ನಿರ್ದೇಶಕ ಸೋನಾಲಿ ಸಂಪತ್ ಕುಮಾರ್ ಶೆಟ್ಟಿ ಪ್ರದಾನ ಮಾಡಿದರು.

ಐದನೇ ವರ್ಷದ ಅಂಗವಾಗಿ ವಿಶೇಷವಾಗಿ ಗ್ರಾಮ್ಯ ಸಾಧಕರಾದ ಗೀತಾ ಎ.ಕುಂದರ್, ಶಾಂತಾ ಐತಾಳ್, ಸುಬ್ಬಯ್ಯ ಪೂಜಾರಿ, ಕೊಲ್ಲು ಪೂಜಾರಿ ಬನ್ನಾಡಿ, ನಾರಾಯಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಆಸಾಡಿ ಒಡ್ರ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಅನಾರೋಗ್ಯ ಪೀಡಿತ ರಾದ ಮಣೂರು ಪಡುಕರೆ ಚಂದ್ರಶೇಖರ ಕಾಂಚನ್ ಅವರಿಗೆ 25ಸಾವಿರ ರೂಗಳ ನೆರವನ್ನು ನೀಡಲಾಯಿತು. ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.

ಸಮಾಜಸೇವಕಿ ಮಲ್ಲಿಕಾ ತಾರಾನಾಥ್ ಹೊಳ್ಳ, ಪರಿಕರವನ್ನು, ತಿಂಡಿ ತಿನಿಸುಗಳನ್ನು ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅನಾವರಣಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಸಲಹೆಗಾರ್ತಿ ಪ್ರೇಮಾ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ.ಮಯ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು.

ವೀಣಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸನ್ಮಾನಪತ್ರವನ್ನು ಸುಜಾತ ಬಾಯರಿ ವಾಚಿಸಿದರು. ಬಹುಮಾನ ಪಟ್ಟಿಯನ್ನು ಗೀತಾ ಶಿವರಾಂ ವಾಚಿಸಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ಹಾಗೂ ಕಲಾವತಿ ಅಶೋಕ್ ನಿರೂಪಿಸಿದರು. ಜತೆಕಾರ್ಯದರ್ಶಿ ಶಕೀಲ ನಾಗರಾಜ್ ವಂದಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.

ಗಮನ ಸೆಳೆದ ತಿಂಡಿ ತಿನಿಸುಗಳು...

ಕಾರ್ಯಕ್ರಮದಲ್ಲಿ ಗ್ರಾಮೀಣ ಹಲವು ಬಗೆಯ ಪರಿಕರಗಳು ತಿಂಡಿ ತಿನಿಸುಗಳಾದ ಪ್ರತೋಡಿ, ಶಕಿಹಿಟ್, ಸುಕಿನುಂಡೆ, ಹೊರ್ಲಿ ಉಂಡೆ, ಕೊಚ್ಚಕ್ಕಿ ಉಂಡೆ, ದಾಸವಾಳ ಸೊಪ್ಪಿನ ಹಿಟ್ಟು, ಹಾಲ್ ಬಾಯಿ, ದೊಣ್ನಾ ತಿಂಡಿ ವಿಶೇಷವಾಗಿ ಗಮನ ಸೆಳೆದವು.

ಅಲ್ಲದೆ ಮಣೂರು ಜಯರಾಮ ಶೆಟ್ಟಿ ಇವರು ಹೊಲಿ ಕರೆಯುವ ಮೂಲಕ ಕುಂದಾಪ್ರ ಭಾಷಾ ಸೊಗಡಿಗೆ ಬಣ್ಣ ಬಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News