ರೇಂಜಾಳ ಭೂಕುಸಿತ ಪ್ರದೇಶಕ್ಕೆ ದಸಂಸ ನಿಯೋಗ ಭೇಟಿ
ಕಾರ್ಕಳ, ಆ.9: ರೇಂಜಾಳ ಗ್ರಾಪಂ ವ್ಯಾಪ್ತಿಯ ರೇಂಜಾಳದ ಪ್ಯಾರಲ್ ಬೆಟ್ಟುವಿನ ಹೆಡ್ಮೇ ಎಂಬಲ್ಲಿ ಸಂಭವಿಸಿರುವ ಭೂಕುಸಿತ ಪ್ರದೇಶದಲ್ಲಿ ಸುಮಾರು 15 ದಲಿತರ ಮನೆಗಳಿದ್ದು, ಇಲ್ಲಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ಜಿಲ್ಲಾ ಸಮಿತಿಯ ನಿಯೋಗ ರವಿವಾರ ಭೇಟಿ ನೀಡಿತು.
ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿತು. ಇತ್ತಿಚೇಗೆ ಸುರಿದ ಭಾರಿ ಮಳೆಗೆ ದಲಿತರ ಮನೆಗಳಿರುವ ಪ್ರದೇದಲ್ಲಿ ಭಾರಿ ಗುಡ್ಡ ಬಿರುಕು ಬಿಟ್ಟು, ಗುಡ್ಡ ಕುಸಿದು ಹರಿಪ್ರಸಾದ್ ಎಂಬವರ ಮನೆಯ ಸಮೀಪದವರೆಗೂ ಮಣ್ಣು ಕೊಚ್ಚಿಕೊಂಡು ಬಂದಿದೆ. ಇದರಿಂದ ಮನೆಗಳು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಜಿಲ್ಲಾಡಳಿತ ತುರ್ತು ರಕ್ಷಣಾ ಕಾರ್ಯವನ್ನು ಆರಂಭಿಸಿ, ಮುಂದಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬೇಕೆಂದು ಎಂದು ನಿಯೋಗ ಆಗ್ರಹಿಸಿದೆ.
ನಿಯೋಗದಲ್ಲಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ತಾಲೂಕು ಪದಾಧಿಕಾರಿ ಗಳಾದ ರಾಘವ ಕುಕುಜೆ, ರಮೇಶ ವೆರ್ವಾಜೆ ಮತ್ತಿತರರು ಉಪಸ್ಥಿತರಿದ್ದರು.