×
Ad

ಮರವಂತೆ | ಕಥೆ, ಕವನ ರಚನಾ ಕಾರ್ಯಗಾರ ಉದ್ಘಾಟನೆ

Update: 2025-12-26 19:31 IST

ಕುಂದಾಪುರ, ಡಿ.26: ಕಥೆ, ಕವನಗಳು ಅನುಭವ ಜನ್ಯವಾಗಿದ್ದು, ಪ್ರತಿಯೊಬ್ಬರು ಪಾಲ್ಗೊಳಿಸುವ ಒಂದು ಪ್ರಕ್ರಿಯೆಯಾಗಿದ್ದು, ಎಲ್ಲಾ ಪ್ರದರ್ಶನ ಪ್ರಕಾರಗಳು ಕಥೆ ಹೇಳುವುದರ ಸ್ತರಣೆಯಾಗಿದೆ ಮತ್ತು ವ್ಯಕ್ತಿಯ ಭಾವನೆಗಳನ್ನು ಸಮರ್ಪಕವಾಗಿ ಹಂಚಿಕೊಳ್ಳುವುದು ಈ ಕಥೆ ಹೇಳುವುದರಿಂದ ಹೆಚ್ಚು ಪ್ರಭಾವ ಬೀರುತ್ತದೆ. ಕಥೆ ಹೇಳುವ ಮತ್ತು ಕೇಳುಗರ ಮಧ್ಯೆ ಶಿಷ್ಟ ಸಂವಹನ ಹಾಗೂ ಬಾಂಧವ್ಯ ಭಾರೀ ಬೇಗ ಹುಟ್ಟಿಕೊಳ್ಳುತ್ತದೆ ಎಂದು ಮರವಂತೆ ಗ್ರಾಪಂ ಅಧ್ಯಕ್ಷ ನಾಗರಾಜ ಪಟಗಾರ್ ಹೇಳಿದ್ದಾರೆ.

ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಮರವಂತೆ ಗ್ರಾಮ ಪಂಚಾಯತ್, ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳಿಗೆ ಕಥೆ ಕವನ ರಚನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಮರವಂತೆ ಶ್ರೀರಾಮ ಕನ್ನಡ ಖಾರ್ವಿ ಸೇವಾ ಸಮಿತಿಯ ಅಧ್ಯಕ್ಷ ವೆಂಕಟರಮಣ ಖಾರ್ವಿ ಮಾತನಾಡಿ, ಮಕ್ಕಳಲ್ಲಿ ವಿವಿಧ ಭಾವನೆಯು ಅನುಭವಕ್ಕೆ ಬಂದು ಹೊಸ ಸಾಧ್ಯತೆಗೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸಲು ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎಂದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಮನ ಹೇರ್ಳೆ ಮಾತನಾಡಿ, ನಾವೆಲ್ಲರೂ ಬೇರೆ ಬೇರೆ ಸನ್ನಿವೇಶದಲ್ಲಿ ನಮ್ಮ ಭಾವನೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಹೇಳುವ ಮತ್ತು ಕೇಳುವ ಪ್ರಕ್ರಿಯೆ ನಿರಂತರವಾಗಿದ್ದು, ಈ ಭೂಮಂಡಲದಲ್ಲಿ ಇನ್ನು ಜೀವಂತವಾಗಿ ಉಳಿದ ಏಕಮಾತ್ರ ಪ್ರಕಾರವೇ ಕಥೆ ಹೇಳುವುದು ಎಂದರು.

ಇವರು ಮಕ್ಕಳಿಗೆ ಬೇರೆ ಬೇರೆ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕಥೆ ಕವನ ರಚನೆ ಮಾಡಲು ಪ್ರೇರಣೆ ನೀಡಿದರು. ಮಕ್ಕಳು ಸುಮಾರು 40ಕ್ಕೂ ಹೆಚ್ಚು ಕವನ ರಚಿಸಿದರು.

ಅಧ್ಯಕ್ಷತೆಯನ್ನು ಸುಜಾತಾ ಮರವಂತೆ ವಹಿಸಿದ್ದರು. ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರ ಪ್ರೌಢಶಾಲೆಯ ಮುಖ್ಯಶಿಕ್ಷಕ ಭಾಸ್ಕರ ಮಯ್ಯ ಸ್ವಾಗತಿಸಿದರು. ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ದಿವ್ಯ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News