ಡಿಸೆಂಬರ್ನಲ್ಲಿ ಕಾಂತಾರ ಅಧ್ಯಾಯ ಒಂದರ ಚಿತ್ರೀಕರಣ ಆರಂಭ: ರಿಷಬ್ ಶೆಟ್ಟಿ
ಕುಂದಾಪುರ, ನ.27: ಕಾಂತಾರದ ಅಧ್ಯಾಯ ಒಂದನ್ನು ಆರಂಭಿಸಿದ್ದು, ಇದು ಅದರ ಮುಂದುವರಿದ ಪಯಣ. ಕಾಂತಾರ ಸಿನೆಮಾಕ್ಕೆ ಮುನ್ನುಡಿಯನ್ನು ಹೇಳಲಿಕ್ಕೆ ಹೊರಟಿದ್ದೇನೆ. ಅದ್ಭುತವಾದ ಚಿತ್ರ ನೀಡಲು ಇಡೀ ಚಿತ್ರ ತಂಡ ಕೆಲಸ ಮಾಡ ಲಿದೆ. ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.
ಕುಂಭಾಸಿಯ ಆನೆಗುಡ್ಡೆಯ ಶ್ರೀವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಂತಾರ-2 ಚಲನಚಿತ್ರದ ಮುಹೂರ್ತ ಹಾಗೂ ಕ್ಲಾಪ್ ಬೋರ್ಡ್ ಬಳಿಕ ಅವರು ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಮಾತಿಗಿಂತ ಕೃತಿಯೇ ಮುಖ್ಯ ಎಂಬುದರಲ್ಲಿ ನನಗೆ ನಂಬಿಕೆ. ಹಾಗಾಗಿ ಸಿನೀಮಾ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಈಗಾಗಲೇ ಬಿಟ್ಟಿರುವ ಪೋಸ್ಟರ್ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತದೆ ಎಂದರು.
ಕರಾವಳಿಯ ಈ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಈ ಭಾಗದಲ್ಲಿ ಚಿತ್ರೀಕರಣ ಆಗುವ ಸಾಧ್ಯತೆಗಳಿವೆ. ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕನ್ನಡಿಗರೇ ಕಾಂತಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರಿಂದ ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹಿಂದಿನಂತೆ ಸ್ಥಳೀಯರ ಜೊತೆ, ನಾಡಿನ ಇತರ ಭಾಗದ ಹೊಸ ಪ್ರತಿಭೆಗಳನ್ನು ಪರಿಗಣಿಸುವ ಯೋಚನೆ ಇದೆ. ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರೆಯಲಿದೆ. ತುಂಬಾ ದೊಡ್ಡ ಜವಾಬ್ದಾರಿ ಇದೆ ಎಂದರು.
ಕಾಂತಾರ-2ಗೆ ಮುಹೂರ್ತ: ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕ್ಲಾಪ್ ಬೋರ್ಡ್ ಮಾಡಿದರು. ರಿಷಬ್ ಅವರ ಪುತ್ರಿ ರಾಧ್ಯಾ ರಿಷಬ್ ಶೆಟ್ಟಿ, ಕ್ಯಾಮರಾ ಸ್ವೀಚ್ಗೆ ಚಾಲನೆ ನೀಡಿದರು.
ನಿರ್ಮಾಪಕ ಹೊಂಬಾಳೆ ಫಿಲ್ಮಸ್ನ ವಿಜಯ್ ಕಿರಗಂದೂರು, ಚಲುವೇ ಗೌಡ, ಸಹ ಲೇಖಕರಾದ ಅನಿರುದ್ಧ್ ಮಹೇಶ್, ಶನಿಲ್ ಗುರು, ಛಾಯಾ ಗ್ರಹಣ ನಿರ್ದೇಶಕ ಅರವಿಂದ್ ಎಸ್.ಕಶ್ಯಪ್, ಸಂಗೀತ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶಕರಾದ ಬಿ.ಅಜನೀಶ್ ಲೋಕನಾಥ್ ಹಾಗೂ ಬೊಬಿ, ಪೋಸ್ಟರ್ ಡಿಸೈನರ್ ಬೆಂಗಳೂರಿನ ಕಾಣೆ ಸ್ಟುಡಿಯೋದ ಸಂತೋಷ್ ಬಳ್ಕೂರ್, ಪ್ರೊಡಕ್ಷನ್ ಡಿಸೈನರ್ ಬಾಂಗ್ಲಾನ್, ಕಾಸ್ಟೂಮ್ ಡಿಸೈನರ್ ಪ್ರಗತಿ ಶೆಟ್ಟಿ, ನಟ ರಾದ ವಿನಯ್ ಬಿದ್ದಪ್ಪ, ಶೈನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ದಿವ್ಯಾಧರ ಶೆಟ್ಟಿ ಮೂಡಗಲ್ಲು, ಪ್ರೊಡಕ್ಷನ್ ವ್ಯವಸ್ಥಾಪಕ ಗಗನಮೂರ್ತಿ, ಸುಹಾಸ್ ಶೆಟ್ಟಿ, ಉದ್ಯಮಿಗಳಾದ ಬೈಲೂರು ಉದಯ ಕುಮಾರ ಶೆಟ್ಟಿ, ವಿನಯ ಕುಮಾರ ಶೆಟ್ಟಿ, ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಮಾಜಿ ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀಷ ಉಪಾಧ್ಯಾಯ ಉಪಸ್ಥಿತರಿದ್ದರು.