ಬೀಡಿ ಕಾರ್ಮಿಕರ ತುಟ್ಟಿಭತ್ಯೆ, ಕನಿಷ್ಠ ಕೂಲಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ
ಕಾರ್ಕಳ, ಡಿ.13: ಬೀಡಿ ಕಾರ್ಮಿಕರ ತುಟ್ಟಿಭತ್ಯೆ, ಕನಿಷ್ಠ ಕೂಲಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ(ಸಿಐಟಿಯು) ನೇತೃತ್ವದಲ್ಲಿ ಇಂದು ಕಾರ್ಕಳ ಮಿನಿ ವಿಧಾನ ಸೌಧ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ಬಳಿಕ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿ 1000 ಬೀಡಿಗೆ ಹೊಸ ವೇತನ 400ರೂ.ನಂತೆ ನಿಗದಿಗೊಳಿಸಿ, ಸರಕಾರ ಆದೇಶ ಮಾಡಬೇಕು. ಬಡ ಬೀಡಿ ಕಾರ್ಮಿಕರಿಗೆ ಅನ್ಯಾಯ ಮಾಡುವ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಚ್ಯುವಿಟಿ ಕಡ್ಡಾಯ ಪಾವತಿಸು ವಂತೆ ಮಾಡಬೇಕು. ಭವಿಷ್ಯ ನಿಧಿ ಕಚೇರಿಯ ನಮ್ಮ ದಾಖಲೆಗಳನ್ನು ತಕ್ಷಣ ಆಧಾರ ಕಾರ್ಡಿನಲ್ಲಿರುವಂತೆ ಸರಿಪಡಿಸಬೇಕು. ವಾರ ಪೂರ್ತಿ ಕೆಲಸ ಅಥವಾ ಕೆಲಸ ಇಲ್ಲದ ದಿನ ವೇತನ ನೀಡಲು ಬೀಡಿ ಮಾಲಕರಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೀಡಿಕಾರ್ಮಿಕರ ನೈಜ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿ, ಪರಿಹಾರ ಕಾಣಬೇಕು. ಕಾನೂನು ಬಾಹಿರ ಬೀಡಿ ಉತ್ಪಾದನೆಯನ್ನು ನಿಲ್ಲಿಸಿ, ಕಾರ್ಮಿಕ ಕಾನೂನುಗಳ ಕಠಣ ಜಾರಿಗೆ ಕ್ರಮ ವಹಿಸಬೇಕು. ಬೀಡಿ ಕಾರ್ಮಿಕರ ಆರೋಗ್ಯದ ಬಗ್ಗೆ ಸರಕಾರ ಜವಾಬ್ದಾರಿ ವಹಿಸಬೇಕು. ಬೀಡಿ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ಒದಗಿಸಬೇಕು. ತಿಂಗಳಿಗೆ 6000ರೂ. ಪಿಂಚಣಿ ನೀಡ ಬೇಕು. ಬೀಡಿಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಜ್ಯ ಬೀಡಿ ಫೆಡರೇಶನ್ನ ಉಪಾಧ್ಯಕ್ಷ, ವಕೀಲ ಬಿ.ಎಂ.ಭಟ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ನ ಅಧ್ಯಕ್ಷ ಮಹಾಬಲ ವಡೆಯರಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಬಲ್ಕೀಸ್, ನಳಿನಿ, ಕಾರ್ಕಳ ಬೀಡಿ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಕೋಶಾಧಿಕಾರಿ ಸುಮತಿ, ಬೆಳ್ತಂಗಡಿ ತಾಲೂಕು ಬೀಡಿ ಸಂಘದ ಕಾರ್ಯದರ್ಶಿ ಈಶ್ಚರಿ, ಜೈಬೀಮ್ ಸಂಘದ ಮುಖಂಡರಾದ ಸಂಜೀವ ಪಳ್ಳಿ, ಕಾರ್ಕಳ ಸಿಐಟಿಯುನ ನಾಗೇಶ್, ಕಾರ್ಕಳ ಬೀಡಿ ಸಂಘದ ಮುಖಂಡರಾದ ಜಯಂತಿ, ವೇದವತಿ, ಪುಷ್ಪಾವತಿ, ಶಕುಂತಳ, ಗೀತಾ, ವನಿತಾ ಉಪಸ್ಥಿತರಿದ್ದರು.