×
Ad

ದುಬೈ: ಮೊಹಮ್ಮದ್ ಆಸೀಫ್‌ಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

Update: 2024-02-23 19:02 IST

ಕುಂದಾಪುರ, ಫೆ.23: ಸೆಂಟ್ ಸಾಂಸ್ಕೃತಿಕ ಸಂಸ್ಥೆ ದುಬೈ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಶಿಕ್ಷಣ, ಬಡ ಹೆಣ್ಣು ಮಕ್ಕಳ ಉಚಿತ ಮದುವೆ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುಂದಾಪುರದ ಮೊಹಮ್ಮದ್ ಆಸೀಫ್ ಅವರಿಗೆ 2024ನೇ ಸಾಲಿನ ವಿಶ್ವ ಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಫೆ.18ರಂದು ಸಂಜೆ ದುಬೈನ ಅಲ್‌ಕುಸಿಸ್‌ನಲ್ಲಿರುವ ಫಾರ್ಚೂನ್ ಪ್ಲಾಝಾ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಆಸೀಫ್ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ರಾಯಭಾರಿ ಲೆ.ಜ.ಡಾ. ಡೇವಿಡ್ ಫ್ರ್ಯಾಂಕ್ ಫೆನಾಂಡೀಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಸೆಂಟ್ ಸಾಂಸ್ಕೃತಿಕ ಸಂಘ ಯುಎಇ ಅಧ್ಯಕ್ಷ ಶೋಧನ್ ಪ್ರಸಾದ್ ಅತ್ತಾವರ, ಡಬ್ಲ್ಯುಕೆಸಿಸಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮೊದಲ ದಿನದ ಕಾರ್ಯಕ್ರಮ ಸೌದಿ ಅರೇಬಿಯಾದ ದಮಾಮ್‌ನಲ್ಲಿ ಫೆ.8ರಂದು ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ನಡೆದಿತ್ತು. ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯನ್ನು ಅನಿವಾಸಿ ಕನ್ನಡಿಗರಲ್ಲಿ ಉಳಿಸಿ ಬೆಳೆಸುವ ಉದ್ದೇಶ ದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಬಂದ ಸಾಹಿತಿಗಳು, ಕಲಾವಿದರಿಂದ ಮತ್ತು ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಕಳೆದ 20 ವರ್ಷ ಗಳಿಂದ ಹಲವು ದೇಶಗಳಲ್ಲಿ ಯಶಸ್ವಿಯಾಗಿ ಕನ್ನಡಿಗರನ್ನು ಜೋಡಿಸುವ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News