ಹಾಲಿನ ದರಕ್ಕೆ ರಾಜಕೀಯ ಬೇಡ: ಉಡುಪಿ ಜಿಲ್ಲಾ ಕೃಷಿಕ ಸಂಘ
ಉಡುಪಿ, ಜೂ.27: ಹೈನುಗಾರರು ಹೆಚ್ಚು ಹಾಲು ಉತ್ಪಾದಿಸುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಅದನ್ನು ಖರೀದಿಸಿ, ಜನರಿಗೆ ವಿತರಿಸುವ ಹಾಲಿನಲ್ಲಿ ಹೆಚ್ಚಳ ಮಾಡಿದೆ. ಅದಕ್ಕೆ ಅನುಸಾರವಾಗಿ ಎರಡು ರೂ. ಹೆಚ್ಚು ತೆಗೆದು ಕೊಳ್ಳಲು ಮುಂದಾಗಿದೆ. ಇದರಿಂದ ಕೃಷಿಕರಿಗೆ ಮತ್ತು ಕೆಎಂಎಫ್ ಇಬ್ಬರಿಗೂ ಒಳ್ಳೆಯದಾಗಲಿದೆ. ಆದರೆ ಇದು ಆಳುವ ಮತ್ತು ವಿಪಕ್ಷಗಳಿಗೆ ರಾಜಕೀಯ ಕಿತ್ತಾಟದ ವಿಷಯವಾಗಿರುವುದು ಮಾತ್ರ ಖಂಡನೀಯ. ರೈತರ ವಿಷಯದಲ್ಲಿ ರಾಜ್ಯದ ಎಲ್ಲ ಪಕ್ಷಗಳೂ ರಾಜಕೀಯ ಬಿಟ್ಟು ಕೃಷಿಕರ ಸಂಕಷ್ಟಗಳ ಪರಿಹಾರದ ಬಗ್ಗೆ ಚರ್ಚೆ ಮಾಡುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಒತ್ತಾಯಿಸಿದೆ.
ವಿತರಿಸುವ ಹಾಲಿನ ಹೆಚ್ಚುವರಿ ಪ್ರಮಾಣಕ್ಕೆ ತಕ್ಕಂತೆ ಎರಡು ರೂ. ಹೆಚ್ಚಾಗಿದೆಯೇ ಹೊರತು ರಾಜಕೀಯದವರು ಬೊಬ್ಬಿಡುವಂತೆ ದರ ಏರಿಕೆಯಾಗಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೃಷಿಕರಿಗೆ ಸಿಗುವ ಹಾಲಿನ ದರ ಬಹಳ ಕಡಿಮೆ ಇದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇಂದು ಹೈನುಗಾರಿಕೆ ನಡೆಸುವವರಿಗೆ ದನ ಕರುಗಳ ಸಾಕಾಣಿಕೆಯಲ್ಲಿ ತಗಲುವ ನಿರ್ವಹಣಾ ವೆಚ್ಚ, ಪಶುಗಳ ರೋಗ, ಗರ್ಭಧಾರಣಾ ಸಮಸ್ಯೆಗಳ ವೈದ್ಯಕೀಯ ಖರ್ಚು, ಮೇವು ದರ ಏರಿಕೆ, ದನ ಕಳ್ಳತನದ ಸಂಕಷ್ಟಗಳ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ತೊರೆಯುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಬೇಡಿಕೆಯ ಪ್ರಮಾಣದಲ್ಲಿ ಹಾಲು ಪೂರೈಕೆ ಇರದೆ ರಾಜ್ಯದಲ್ಲಿ ರಾಸಾಯನಿಕ ಬಳಸಿ ನಕಲಿ ಹಾಲು ತಯಾರಕರು ಹುಟ್ಟಿಕೊಂಡು ನಗರವಲ್ಲದೆ ಹಳ್ಳಿಗಳಲ್ಲೂ ಜನರ ಆರೋಗ್ಯ ದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಇದರ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಅಧಿಕಾರಸ್ಥರು ಪ್ರತಿಭಟನೆ ದಿಗ್ಬಂಧನ ಹೋರಾಟ ಮಾಡಿದರೆ ನಿಜಕ್ಕೂ ಜನರಿಗೆ ಮತ್ತು ಕೃಷಿಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಸಂಘ ಹೇಳಿದೆ.
ಸರಕಾರ ಕೂಡಾ ಹೈನುಗಾರರ ಹಿತಾಸಕ್ತಿ ಕಾಪಾಡಲು ಹಾಲಿನ ಖರೀದಿ ದರ ಕನಿಷ್ಠ 5 ರೂ. ಮತ್ತು ಸಹಾಯಧನ 10 ರೂ.ನಂತೆ ಏರಿಸಬೇಕು. ರೈತರಿಗೆ ಹಾಲು ಪೂರೈಕೆ ಲೀಟರೊಂದಕ್ಕೆ 50 ರೂ. ದರ ಸಿಗುವಂತೆ ಮಾಡಿ ಹೈನುಗಾರರನ್ನು ರಕ್ಷಿಸುವಂತೆ ಮುಖ್ಯಮಂತ್ರಿಯವರನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಒಂದು ವೇಳೆ ಹಾಲಿನ ದರ ಏರಿಸದಿದ್ದರೆ ರೈತರೇ ಆಡಳಿತಾರೂಢರ ಸಹಿತ ಎಲ್ಲಾ ರಾಜಕೀಯ ಮುಖಂಡರ ಮನೆಯ ಮುಂದೆ ದಿಗ್ಬಂಧನ ಪ್ರತಿಭಟನೆ ನಡೆಸಲಿ ದ್ದೇವೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹಾಗೂ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.