ಹೊಸದಿಲ್ಲಿಯಲ್ಲಿ ಸಚಿವ ಗಡ್ಕರಿ ಭೇಟಿಯಾದ ಕೋಟ: ಸಂತೆಕಟ್ಟೆ-ಇಂದ್ರಾಳಿ ರಾ.ಹೆದ್ದಾರಿಗಳ ತುರ್ತು ಕಾಮಗಾರಿಗೆ ಮನವಿ
ಉಡುಪಿ, ಜೂ.27: ಟೆಂಡರ್ ಅವಧಿ ಮುಗಿದಿದ್ದರೂ ಉಡುಪಿ ಜಿಲ್ಲೆಯ ಕಲ್ಯಾಣಪುರ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಅಂಡರ್ಪಾಸ್ ಕಾಮಗಾರಿ ಹಾಗೂ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯೊಂದಿಗೆ ಮಲ್ಪೆ ಭೂಸ್ವಾಧೀನದ ವಿಳಂಬ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಧ ಹೊಸದಿಲ್ಲಿಯಲ್ಲಿ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಕೋಟ ಅವು ಈಗ ನೆನೆಗುದ್ದಿಗೆ ಬಿದ್ದಿರುವ ತನಿಕೋಡು ಗೇಟ್ನಿಂದ ಎಸ್.ಕೆ.ಬಾರ್ಡರ್ವರೆಗಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಗಳನ್ನು ತುರ್ತಾಗಿ ಪರಿಹರಿಸ ಬೇಕೆಂದು ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವ ಗಡ್ಕರಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾಮಗಾರಿಗಳನ್ನು ವಿಳಂಬ ವಿಲ್ಲದೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಆದೇಶ ನೀಡಿದ್ದಾರೆ. ಮುಂದಿನ ಡಿಸೆಂಬರ್ ಒಳಗೆ ತಾನೇ ಬಂದು ಎಲ್ಲಾ ಕಾಮಗಾರಿಗಳನ್ನು ಉದ್ಘಾಟಿಸುವುದಾಗಿ ಕೇಂದ್ರ ಸಚಿವರು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಅವರೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಿ ವೈ ರಾಘವೇಂದ್ರ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಉಪಸ್ಥಿತರಿದ್ದರು.