×
Ad

ಹೆಜಮಾಡಿ ಟೋಲ್ ಗೇಟ್ ವಿರುದ್ಧ ಆಕ್ರೋಶ: ಬಸ್ಸು ಮಾಲಕರಿಂದ ಸಾಂಕೇತಿಕ ಪ್ರತಿಭಟನೆ

Update: 2025-02-05 11:45 IST

ಪಡುಬಿದ್ರೆ: ಹೆಜಮಾಡಿ ಟೋಲ್ ಗೇಟ್ ನಲ್ಲಿ ಬಸ್ಸುಗಳಿಂದ ಅವೈಜ್ಞಾನಿಕವಾಗಿ ಟೋಲ್ ಕಡಿತ ಮಾಡಲಾಗುತ್ತಿದೆ. ಎರಡು ದಿನಗಳ ಒಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ತೀವ್ರವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಬಸ್ಸು ಮಾಲಕರು ಎಚ್ಚರಿಸಿದ್ದಾರೆ.

 ಹೆಜಮಾಡಿ ಟೋಲ್ ಗೇಟ್ ನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಕರಾವಳಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ಬುಧವಾರ ಸಾಂಕೇತಿಕವಾಗಿ ಪ್ರತಿಭಟಿಸಿ ಟೋಲ್ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

 ತಮ್ಮ ಮಿನಿ ಬಸ್ಸುಗಳಿಗೆ ಘನ ವಾಹನಗಳ ಟೋಲನ್ನು ಕಡಿತಗೊಳಿಸಲಾಗುತ್ತಿದ್ದು, ಅವೈಜ್ಞಾನಿಕವಾಗಿರುವ ಈ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ  ಬಸ್ಸುಗಳನ್ನೆಲ್ಲಾ ಟೋಲ್ ಗೆ ಅಡ್ಡವಾಗಿರಿಸಿ ತೀವ್ರತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

 ಫಾಸ್ಟ್ಟ್ಯಾಗ್ ಮೊತ್ತದ ಹೊರತಾಗಿಯೂ ಮತ್ತೆ ತಮಗೆ ಬರೆ ಬೀಳುತ್ತಿದೆ. ದೇಶದ ಎಲ್ಲೂ ಇಲ್ಲದ ಪರಿಸ್ಥಿತಿ ಇಲ್ಲಿದೆ. ನಮಗೆ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ಮಾಡಲಿರುವುದಾಗಿ ದಿಲ್ ರಾಜ್ ಆಳ್ವ ಹೇಳಿದರು.

 ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ. ಹೆಜಮಾಡಿ, ಸಾಸ್ತಾನ, ಶಿರೂರುಗಳಲ್ಲಿ ಪ್ರತಿ ಬಸ್ ಗಳಿಂದ ದಿನಕ್ಕೆ 700 ರೂ.ನಷ್ಟು ಮೊತ್ತ ಟೋಲ್ ಹೆಸರಲ್ಲಿ ಸುಲಿಗೆಯಾಗುತ್ತಿದೆ ಎಂದು ದೂರಿದರು.

ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಟೋಲ್ ಹೆಸರಿನಲ್ಲಿ ಹಗಲು ದರೋಡೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ಮಾಲಕರಾದ ಜೀವಂಧರ್ ಬಲ್ಲಾಳ್, ರಝಾಕ್ ಮೊದಲಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News