×
Ad

ನಿಟ್ಟೆ | ‘ಎಲಿಕ್ಸಿರ್’ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟನೆ

Update: 2025-11-10 21:51 IST

ನಿಟ್ಟೆ, ನ.10: ಜ್ಞಾನ ಮತ್ತು ಕೌಶಲ್ಯವೆಂಬುದು ದ್ವಿಚಕ್ರ ವಾಹನದ ಎರಡು ಚಕ್ರಗಳಿದ್ದಂತೆ. ಕೇವಲ ಜ್ಞಾನದಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಾಗದು. ಇಂದಿನ ದಿನಗಳಲ್ಲಿ ಪ್ರತಿಯೊಂದು ಉದ್ಯೋಗದಲ್ಲೂ ಕೌಶಲ್ಯವು ಪ್ರಮುಖ ಅಂಶವಾಗಿ ಪರಿಗಣಿಸಲ್ಪಡುತ್ತದೆ ಎಂದು ಮುಂಬೈ ಟ್ರಾಂಬೆಯ ಟಾಟಾ ಪವರ್ಸ್ಕಿಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ನ ನಿವೃತ್ತ ಪ್ರಾಂಶುಪಾಲ ಬಾಲರಾಜ ಕಜಂಪಾಡಿ ಭಟ್ ಅಭಿಪ್ರಾಯಪಟ್ಟಿದ್ದಾರೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್- ಇಲೆಕ್ಟ್ರಾನಿಕ್ಸ್ ವಿಭಾಗವು ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಂಡ ‘ಎಲಿಕ್ಸಿರ್ 2025’ ವಿದ್ಯಾರ್ಥಿಗಳ ಮಾದರಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನವೀನತೆ ಮತ್ತು ಅನುಭವಾಧಾರಿತ ಅಧ್ಯಯನದತ್ತ ಗಮನ ಹರಿಸಬೇಕು ಎಂದು ಬಾಲರಾಜ್ ಭಟ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗೌರವ ಅತಿಥಿಯಾಗಿ ಬಾಗವಹಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಮಾತನಾಡಿ, ಸೃಜನಶೀಲತೆ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ವಿಭಾಗದ ಶ್ರಮವನ್ನು ಪ್ರಶಂಸಿಸಿದರು.

ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು ವಹಿಸಿದ್ದರು. ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಕೆ. ಅತಿಥಿಗಳನ್ನು ಸ್ವಾಗತಿಸಿದರು.

ಈ ವಸ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿನೂತನ ಯೋಜನೆಗಳನ್ನು ಪ್ರದರ್ಶಿಸಲಾಯಿತು. ಇವುಗಳಲ್ಲಿ ವಿದ್ಯುತ್ ವ್ಯವಸ್ಥೆಗಳು, ರಿನೀವೇಬಲ್ ಎನರ್ಜಿ, ಸ್ವಯಂಚಾಲಿತ ತಂತ್ರಜ್ಞಾನಗಳು ಮತ್ತು ಎಂಬೆಡೆಡ್ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸೃಜನಶೀಲ ಪರಿಹಾರಗಳನ್ನು ಒಳಗೊಂಡಿದ್ದವು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ವಿನ್ಯಾಸಗೊಳಿಸಿದ ಸಂಸ್ಥೆಯ ಎರಡು ಆಂತರಿಕ ಉತ್ಪನ್ನಗಳು- ’ಟ್ರೈಸೈಕಲ್’ ಮತ್ತು ‘ಇ-ಸ್ಪಿನ್ ಬೈಕ್’-ನ್ನು ಸಂಸ್ಥೆಯ ಬಳಕೆಗೆ ಬಿಡುಗಡೆ ಮಾಡಲಾಯಿತು.

ಎರಡು ದಿನಗಳ ಪ್ರದರ್ಶನದಲ್ಲಿ 10 ಕೈಗಾರಿಕಾ ಪ್ರತಿನಿಧಿಗಳು ಹಾಗೂ 35 ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ, ಅಕಾಡೆಮಿಕ್- ಕೈಗಾರಿಕಾ- ಹಳೆಯ ವಿದ್ಯಾರ್ಥಿ ಸಂವಾದವನ್ನು ನಡೆಸಿಕೊಟ್ಟರು. ಸಂಯೋಜಕ ರವಿಕಿರಣ ರಾವ್ ವಂದಿಸಿದರು. ಭೂಮಿಕಾ ಆಚಾರ್ಯ ಅತಿಥಿಗಳನ್ನು ಪರಿಚಯಿಸಿ ಅನ್ವಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News