×
Ad

ರಾಜ್ಯದ ಪೊಲೀಸರು ತಮ್ಮ ಕರ್ತವ್ಯಗಳತ್ತ ಆಳವಾದ ಆಸಕ್ತಿ, ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು : ಸುಧೀರ್ ಕುಮಾರ್ ರೆಡ್ಡಿ

Update: 2025-11-11 19:16 IST

ಉಡುಪಿ, ನ.11: ರಾಜ್ಯದ ಪೊಲೀಸರು ತಮ್ಮ ಕರ್ತವ್ಯಗಳತ್ತ ಆಳವಾದ ಆಸಕ್ತಿ ಮತ್ತು ನಿಷ್ಠೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಪ್ರಕರಣವನ್ನು ಬೇಧಿಸಲು ಸಾಧ್ಯವಾಗುತ್ತದೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಮಣಿಪಾಲ ಕೆಎಂಸಿ ಕ್ಲಿನಿಕಲ್ ಮತ್ತು ಇನೋವೆಟಿಕ್ ಫಾರೆನ್ಸಿಕ್ ಸೆಂಟರ್ ಸಹಯೋಗದೊಂದಿಗೆ ಮಣಿಪಾಲ ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಆಯೋಜಿಸಲಾದ ಮಂಗಳೂರು ಪಶ್ಚಿಮ ವಲಯ ಮಟ್ಟದ ಏಳನೇ ಪೊಲೀಸ್ ಕರ್ತವ್ಯ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಪ್ರಕರಣದ ತನಿಖೆಯಲ್ಲಿ ಆಸಕ್ತಿ ಇದ್ದರೆ ಅದನ್ನು ಪತ್ತೆ ಹಚ್ಚಲು ಯಾವುದೇ ವಿಶೇಷ ತರಬೇತಿಯ ಅಗತ್ಯ ಕೊಡಬೇಕಾಗಿಲ್ಲ. ಅಪರಾಧ ಸ್ಥಳದಲ್ಲಿ ಸಾಕ್ಷ್ಯ ಹುಡುಕುವಾಗಲು ಅದೇ ಮನೋಭಾವ ಮತ್ತು ಶ್ರದ್ಧೆ ಮುಖ್ಯವಾಗುತ್ತದೆ. ಇದರಿಂದ ಯಾರಿಗೂ ಕಾಣದ ಸಾಕ್ಷ್ಯಗಳು ನಮ್ಮ ಕಣ್ಣಿಗೆ ಬೀಳುತ್ತದೆ. ನಮ್ಮ ಉದ್ದೇಶ ಕೇವಲ ಪ್ರಕರಣವನ್ನು ಬೇಧಿಸುವುದಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪೊಲೀಸರು ಸ್ಪರ್ಧೆಯಲ್ಲೂ ಹೆಚ್ಚಿನ ಪ್ರಯತ್ನ ಮಾಡಿದರೆ ಇತರ ರಾಜ್ಯಗಳಿಂದ ಹೆಚ್ಚಿನ ಪದಕಗಳನ್ನು ಪಡೆಯಬಹುದು. ಗೆಲ್ಲಬೇಕೆಂಬ ಛಲ ಇದ್ದರೆ ಕೊನೆಯ ಕ್ಷಣದವರೆಗೂ ಸೋಲು ಒಪ್ಪದೆ ಪ್ರಯತ್ನ ಪಡಬೇಕು. ಇದರಿಂದ ನಾವು ಯಾರಿಗೂ ಸಾಟಿ ಅಲ್ಲ ಮತ್ತು ನಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಬೇರೆ, ಕರ್ತವ್ಯದಲ್ಲಿ ಒತ್ತಡಗಳ ನಡುವೆ ಪ್ರಕರಣ ಭೇಧಿಸುವುದೇ ಬೇರೆ ಆಗಿರುತ್ತದೆ. ಯಾಕೆಂದರೆ ಸ್ಪರ್ಧೆಯ ಸಂದರ್ಭದಲ್ಲಿ ಇರುವ ಸ್ವತಂತ್ರ ಕರ್ತವ್ಯ ನಿರ್ವಹಿಸುವಾಗ ಇರುವುದಿಲ್ಲ ಎಂದು ಅವರು ಹೇಳಿದರು.

ಮಣಿಪಾಲ ಕೆಎಂಸಿಯ ಡೀನ್ ಡಾ.ಅನೀಲ್ ಭಟ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಮತ್ತು ವೈಜ್ಞಾನಿಕ ತನಿಖೆಗಳಲ್ಲಿ ಇಂದು ತಂತ್ರಜ್ಞಾನದ ಪ್ರಾಮುಖ್ಯತೆ ದಿನೇ ದಿನೇ ಹೆಚ್ಚುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸಾಕ್ಷ್ಯ ಸಂಗ್ರಹಣೆ ಮತ್ತು ಸಂರಕ್ಷಣೆ ಸರಿಯಾಗಿ ನಡೆಸುವುದು ಅಪರಾಧ ತನಿಖೆಯಲ್ಲಿ ಅತ್ಯಂತ ಪ್ರಮುಖ ಅಂಶವಾಗಿದೆ. ಪೊಲೀಸರು ದಿನನಿತ್ಯದ ಕರ್ತವ್ಯದಲ್ಲಿ ನಾವು ನಮ್ಮನ್ನು ನವೀಕರಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್.ನಾಯ್ಕ್ ವಹಿಸಿದ್ದರು. ಮಂಗಳೂರು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕಿ ಸುಜಾತ ಕೆ.ಎಂ. ಉಪಸ್ಥಿತರಿದ್ದರು.

ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಸ್ವಾಗತಿಸಿದರು. ಮಂಗಳೂರು ನಗರ ಫಿಂಗರ್ ಫ್ರಿಂಟ್ ಬ್ಯುರೋ ಪೊಲೀಸ್ ನಿರೀಕ್ಷಕ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಫಿಂಗರ್ ಪ್ರಿಂಟ್ ಬ್ಯುರೋ ಪೊಲೀಸ್ ನಿರೀಕ್ಷಕ ಸಂತೋಷ್ ವಂದಿಸಿದರು. ಹೆಡ್ಕಾನ್ಸ್ಟೇಬಲ್ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.



‘ಮಂಗಳೂರು ಪಶ್ಚಿಮ ವಲಯದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರು, ದೇಶದ ಯಾವುದೇ ಭಾಗದಲ್ಲೂ ಸಮರ್ಥವಾಗಿ ಕರ್ತವ್ಯ ನಿರ್ವಹಿಸಬಲ್ಲರು. ಆದುದರಿಂದ ಪ್ರತಿ ಅವಕಾಶವನ್ನೂ ಸರಿಯಾಗಿ ಬಳಸಿಕೊಳ್ಳಬೇಕು. ಪ್ರತಿದಿನ ಮಾಡುವ ಕೆಲಸವೇ ನಮಗೆ ತರಬೇತಿ ಆಗಬೇಕು. ಸವಾಲು ಆಗಿ ಸ್ವೀಕರಿಸಿ ತಮ್ಮ ಕೌಶಲ್ಯತೆಯನ್ನು ತೋರಿಸಬೇಕು. ನೀವು ಅತ್ಯುತ್ತಮವಾಗಿದ್ದರೆ ಸಮಾಜಕ್ಕೆ ಉತ್ತಮ ಪೊಲೀಸರನ್ನು ನೀಡಲು ಸಾಧ್ಯವಾಗುತ್ತದೆ’

-ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು ನಗರ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News