×
Ad

ಉಡುಪಿ ಮಲ್ಲಿಗೆ, ಮಟ್ಟುಗುಳ್ಳ ರಫ್ತು ಅವಕಾಶ; ಕಾರ್ಯಾಗಾರ

Update: 2026-01-27 20:54 IST

ಉಡುಪಿ, ಜ.27: ಉಡುಪಿ ಜಿಲ್ಲೆಯದೇ ಆದ ಎರಡು ವಿಶಿಷ್ಟ ಬೆಳೆಗಳಾದ ಉಡುಪಿ (ಶಂಕರಪುರ) ಮಲ್ಲಿಗೆ ಹಾಗೂ ಮಟ್ಟುಗುಳ್ಳ (ಬದನೆ)ವನ್ನು ರಫ್ತು ಮಾಡಲು ಇರುವ ಅವಕಾಶಗಳ ಕುರಿತಂತೆ ಕಾರ್ಯಾಗಾರವೊಂದು ಉಡುಪಿಯ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ನಡೆದಿ ರುವ ಫಲಪುಷ್ಪ ಪ್ರದರ್ಶನ-2026ರಲ್ಲಿ ಇಂದು ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳಗಳು ಭೌಗೋಳಿಕ ಗುರುತಿಸುವಿಕೆ (ಜಿಐ) ಮಾನ್ಯತೆ ಯನ್ನು ಪಡೆದಿವೆ. ಇವುಗಳನ್ನು ಹಾಳಾಗದಂತೆ ಹೊರರಾಜ್ಯ, ಹೋರದೇಶಗಳಿಗೆ ಕಳುಹಿಸಲು ಇರುವ ಅವಕಾಶ ಗಳ ಕುರಿತು ಅಪೇಡಾ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಅವರು, ಜಿಲ್ಲೆಯ ಉಡುಪಿ ಮಲ್ಲಿಗೆ ಮತ್ತು ಮಟ್ಟು ಗುಳ್ಳ ಬದನೆ ಬೆಳೆಗಳು ಜಿ.ಐ. ಮಾನ್ಯತೆ ಹೊಂದಿದ್ದು, ಈ ಬೆಳೆಗಳಡಿ ರೈತ ಉತ್ಪಾದಕರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಈ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಬೆಳೆಗಾರರು ಬೆಳೆದ ಉತ್ಪನ್ನ ಗಳನ್ನು ರಫ್ತು ಮಾಡುವ ಬಗ್ಗೆ ಆಯೋಜಿಸಿರುವ ಕಾರ್ಯಾಗಾರದ ಪ್ರಯೋಜನೆ ಪಡೆಯುವಂತೆ ಕೋರಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಅಪೇಡಾ ಸಂಸ್ಥೆಯ ವ್ಯವಸ್ಥಾಪಕರಾದ ಮಧುಮತಿ ಹಾಗೂ ಕಾರಂತ, ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳನ್ನು ರಫ್ತು ಮಾಡಲು ಇರುವ ಅವಕಾಶಗಳು ಹಾಗೂ ರಫ್ತು ಮಾಡಲು ಅಪೇಡಾ ಸಂಸ್ಥೆಯಿಂದ ಸಿಗುವ ವಿವಿಧ ಸವಲತ್ತುಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿ ಈ ಬಗ್ಗೆ ಬೆಳೆ ಬೆಳೆಯುವ ರೈತರು ಗಮನ ಹರಿಸುವಂತೆ ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಜಿಲ್ಲೆ ಯಿಂದ ರಫ್ತಾಗುವ ಉತ್ಪನ್ನಗಳಲ್ಲಿ ಜಲೋತ್ಪನ್ನಗಳೇ ಪ್ರಮುಖವಾಗಿದ್ದು, ರಪ್ತು ಗುಣಮಟ್ಟದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆ ಬೆಳೆಗಳನ್ನು ಉತ್ಪಾದನೆ ಮಾಡಿ ಅವಕಾಶದ ಸದುಪಯೋಗ ಪಡೆಯುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪಕುಲಪತಿ ಎಂ.ಕೆ.ನಾಯಕ್, ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಬಂಗೇರಾ ಅಲ್ಲದೇ ವಿವಿಧ ಬೆಳೆಗಾರರು ಉಪಸ್ಥಿತರಿದ್ದರು. ಹೇಮಂತ ಕುಮಾರ್ ಎಲ್ ಕಾರ್ಯಕ್ರಮ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News