ಭಟ್ಕಳ : ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಇನ್ಫಿನಿಟಿ ಆರ್ಗನೈಸೇಶನ್ ವತಿಯಿಂದ ಶೈಕ್ಷಣಿಕ ಪರಿಕರ ವಿತರಣೆ
ಭಟ್ಕಳ : ತಾಲ್ಲೂಕಿನ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇನ್ಫಿನಿಟಿ ಆರ್ಗನೈಸೇಶನ್ ವತಿಯಿಂದ ಶಾಲಾ ಬ್ಯಾಗ್ ಮತ್ತಿತರ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಪರಿಕರ ವಿತರಿಸಿ ಮಾತನಾಡಿದ ಇನ್ಫಿನಿಟಿ ಆರ್ಗನೈಸೇಶನ್ ಮುಖ್ಯಸ್ಥೆ ಮತ್ತು ಸಾಹಿತಿ ಡಾ. ನಿವಿಯಾ ಗೋಮ್ಸ್, ಇನ್ಫಿನಿಟಿ ಆರ್ಗನೈಸೇಶನ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲರೂ ಶಿಕ್ಷಣ ಪಡೆಯಬೇಕು ಎನ್ನುವುದು ಆರ್ಗನೈಸೇಶನ್ನ ಆಶಯವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಇದ್ದರೆ ಏನನ್ನೂ ಸಾಧಿಸಬಹುದು ಎಂದರು.
ಇಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಉತ್ತಮ ಅಂಕಗಳಿಸಿ ಶಾಲೆಗೆ, ಊರಿಗೆ ಕೀರ್ತಿ ತರಬೇಕು. ಶಿವಶಾಂತಿಕಾ ಪ್ರೌಢಶಾಲೆ ಸುಂದರ ಪರಿಸರದಲ್ಲಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯನ್ನು ಉಳಿಸಿ ಬೆಳೆಸಬೇಕು. ದಾನಿಗಳು ಶಾಲೆಗೆ ಸಹಕಾರ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ಮಾತನಾಡಿ, ಪ್ರೌಢಶಾಲೆ ದಾನಿಗಳ ಸಹಾಯದಿಂದ ನಡೆಸಬೇಕಿದೆ. ಡಾ. ನಿವಿಯಾ ಗೋಮ್ಸ್ ಅವರು ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್ ಮತ್ತಿತರ ಪರಿಕರ ನೀಡುವುದರ ಮೂಲಕ ನೆರವಾಗಿದ್ದಾರೆ. ಇದನ್ನು ಮಕ್ಕಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ರಾಘವೇಂದ್ರ ಹೆಬ್ಬಾರ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ತೆರೆಸಾ ನೊರೋನ್ಹಾ, ಪೀಟರ್ ಗೋಮ್ಸ್, ವೆಂಕಟೇಶ ದೇವಾಡಿಗ, ಗಣೇಶ ಅಡಿಗ, ವೆರೋನಿಕಾ, ಶ್ರುತಿ ರಾಕೇಶ್, ರಾಕೇಶ್, ದೇವ್ ಮುಂತಾದರಿದ್ದರು. ಮುಖ್ಯ ಶಿಕ್ಷಕ ಪಿ.ಟಿ. ಚಹ್ವಾಣ ಸ್ವಾಗತಿಸಿದರು. ಶಿಕ್ಷಕ ದಿನೇಶ್ ನಿರೂಪಿಸಿದರು. ದೈಹಿಕ ಶಿಕ್ಷಕ ವಿನಾಯಕ ಭಟ್ಟ ವಂದಿಸಿದರು.