×
Ad

ಸದೃಢ ದೇಶ ನಿರ್ಮಾಣಕ್ಕೆ ಕುಟುಂಬವೇ ತಳಪಾಯ: ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ

Update: 2026-01-14 22:10 IST

ಭಟ್ಕಳ: ಸದೃಢವಾದ ರಾಷ್ಟ್ರ ನಿರ್ಮಾಣಕ್ಕೆ ಕುಟುಂಬವೇ ಮೊದಲ ಮತ್ತು ಅತ್ಯಂತ ಪ್ರಮುಖ ತಳಪಾಯವಾಗಿದ್ದು, ಕುಟುಂಬ ಗಟ್ಟಿಯಾದರೆ ಸಮಾಜ ಹಾಗೂ ರಾಜ್ಯವೂ ಗಟ್ಟಿಯಾಗುತ್ತದೆ ಎಂದು ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ ಹೇಳಿದರು.

ನಗರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಲಾಗಿದ್ದ ‘ಸಂತೃಪ್ತ ಕುಟುಂಬ, ಸದೃಢ ಸಮಾಜ’ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಮಾತುಗಳನ್ನು ಸ್ಮರಿಸಿ, ದೇಶದ ಬಲವರ್ಧನೆಯಲ್ಲಿ ಕೌಟುಂಬಿಕ ವ್ಯವಸ್ಥೆಯ ಮಹತ್ವವನ್ನು ಒತ್ತಿ ಹೇಳಿದರು.

ಇಂದಿನ ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜನರೇಷನ್ ಝೀ ಪೀಳಿಗೆಯಲ್ಲಿ ತಾಳ್ಮೆ ಮತ್ತು ಹೊಂದಾಣಿಕೆಯ ಕೊರತೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ ರೀಲ್ಸ್ ಸಂಸ್ಕೃತಿ ಹೆಚ್ಚಾಗುತ್ತಿದೆ, ಬದುಕಿನಲ್ಲಿ ಯಾವುದೂ ತಕ್ಷಣ ಸಿಗುವುದಿಲ್ಲ ಎಂಬ ಸತ್ಯವನ್ನು ಯುವಜನತೆ ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಹಾಗೂ ಪ್ರವಚನಕಾರ ಮುಹಮ್ಮದ್ ಕುಂಞಿ, ಕುಟುಂಬವು ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ, ಅದು ದೇವ ನಿರ್ಮಿತ ಪವಿತ್ರ ವ್ಯವಸ್ಥೆ ಎಂದು ಹೇಳಿದರು. ಕುಟುಂಬ ಮೌಲ್ಯಗಳು ಕುಸಿದರೆ ಇಡೀ ಸಮಾಜವೇ ಕುಸಿಯುತ್ತದೆ ಎಂದು ಎಚ್ಚರಿಸಿದರು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದರೂ ಸತ್ಯ, ನ್ಯಾಯ, ಸಹನೆ, ಕರುಣೆ ಹಾಗೂ ಪರೋಪಕಾರ ದಂತಹ ಮೌಲ್ಯಗಳು ಎಂದಿಗೂ ಬದಲಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿದ್ದು, ಕುಟುಂಬದೊಳಗಿನ ಆತ್ಮೀಯತೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳನ್ನು ಕೇವಲ ವೃತ್ತಿಪರರನ್ನಾಗಿ ಮಾಡುವುದಕ್ಕಿಂತ ಅವರಿಗೆ ಪ್ರೀತಿ, ಗೌರವ ಮತ್ತು ಸಹನೆಯ ಪಾಠಗಳನ್ನು ಮನೆಯಲ್ಲೇ ಕಲಿಸಬೇಕು ಎಂದ ಅವರು, ಡಾ. ಅಬ್ದುಲ್ ಕಲಾಂ ಅವರ ಬಾಲ್ಯದ ಘಟನೆಯನ್ನು ಉಲ್ಲೇಖಿಸಿ, ಕುಟುಂಬದಲ್ಲಿ ಹಿರಿಯರು ತೋರಿಸುವ ಮೌಲ್ಯಗಳೇ ಮಕ್ಕಳಿಗೆ ಜೀವನ ಪಾಠವಾಗುತ್ತವೆ ಎಂದು ತಿಳಿಸಿದರು. ಪೋಷಕರನ್ನು ವೃದ್ಧಾಪ್ಯದಲ್ಲಿ ಪ್ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಕುರಾನ್ ಬೋಧನೆಗಳನ್ನು ನೆನಪಿಸಿದರು.

ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಆಧುನಿಕ ಯುಗದಲ್ಲಿ ಮನೆಗಳು ದೊಡ್ಡದಾಗುತ್ತಿದ್ದರೂ ಮನಸ್ಸುಗಳು ಸಣ್ಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ತಾಂತ್ರಿಕವಾಗಿ ಅಣುವನ್ನೂ ವಿಭಜಿಸುವಷ್ಟು ಪ್ರಗತಿ ಸಾಧಿಸಿದ್ದರೂ, ನಮ್ಮೊಳಗಿನ ಅಹಂಕಾರವನ್ನು ಒಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ವಿವಿಧ ಧರ್ಮಗಳ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಮೂಲ ಸಂದೇಶ ಮಾನವೀಯ ತೆಯೇ ಆಗಿದ್ದು, ಧರ್ಮವು ಗೋಡೆ ಕಟ್ಟಲು ಅಲ್ಲ, ದೃಷ್ಟಿಕೋನವನ್ನು ವಿಶಾಲಗೊಳಿಸಲು ಸಹಾಯಕವಾಗಬೇಕು ಎಂದರು. ಮಕ್ಕಳ ಶಿಕ್ಷಣವು ಪುಸ್ತಕಗಳಿಗೆ ಸೀಮಿತವಾಗದೇ, ಬದುಕಿನಲ್ಲಿ ಪ್ರತಿಬಿಂಬಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಸಮಾಜವನ್ನು ಒಗ್ಗೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ, ಭಟ್ಕಳ ತನ್ನ ಮೂಲ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಸಂಸ್ಕೃತಿಯತ್ತ ಮರಳುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡ ರಾಮಾ ಮೊಗೇರ್, ನೇತ್ರಾಣಿ ಗುಡ್ಡದ ಉದಾಹರಣೆ ನೀಡುತ್ತಾ, ಭಟ್ಕಳದ ಸೌಹಾರ್ದ ಪರಂಪರೆ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಮೊದಲು ಕುಟುಂಬ ಒಗ್ಗೂಡಿದರೆ ಸಮಾಜವೂ ಸ್ವಯಂ ಒಗ್ಗೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಧ್ಯಾಪಕ ಆರ್.ಎಸ್. ನಾಯಕ ಹಾಗೂ ಕಾರ್ಮಿಕ ಮುಖಂಡ ಜಿ.ಎನ್. ರೇವಣಕರ್, ತಂಝಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, , ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ್ ಪೂಜಾರಿ ಮಾತನಾಡಿ, ಭಾರತದ ವೈವಿಧ್ಯತೆಯೇ ಅದರ ಸೊಬಗು ಸಮಾಜವನ್ನು ಒಡೆಯುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.

ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಪ್ರಸ್ತಾವಿಕವಾಗಿ ಮಾತ ನಾಡಿ ಸ್ವಾಗತಿಸಿದರು. ಕುರ್‌ಆನ್ ಪ್ರವಚನ ಸಂಚಾಲಕ ಇಂಜಿನೀಯರ್ ನಝೀರ್ ಖಾಝಿ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News