ಹರಪನಹಳ್ಳಿ: ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ಹಾಗೂ ರೋಸ್ಟರ್ ಬಿಂದು ಆದೇಶವನ್ನು ರದ್ದುಗೊಳಿಸಿ, ಹಳೆಯ ಮೀಸಲಾತಿ ವ್ಯವಸ್ಥೆ ಮತ್ತು ರೋಸ್ಟರ್ ಬಿಂದು ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯದ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹರಿಹರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಐ.ಬಿ. ವೃತ್ತಕ್ಕೆ ತೆರಳಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಒಳಮೀಸಲಾತಿ ಹಂಚಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಬಂಜಾರ, ಭೋವಿ, ಕೊರಚ ಹಾಗೂ ಕೊರಮ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು. ಅಲೆಮಾರಿ ಸಮುದಾಯದ 59 ಜಾತಿಗಳನ್ನು ಸಿ. ಗುಂಪಿನಿಂದ ಪ್ರತ್ಯೇಕಿಸಿ ಶೇ.1ರಷ್ಟು ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ರೋಸ್ಟರ್ ಬಿಂದುಗಳಿಗೆ ಸಂಬಂಧಿಸಿದ ಲೋಪದೋಷಗಳನ್ನು ಪರಿಶೀಲಿಸಿ, ನ್ಯಾಯಯುತವಾಗಿ ಹುದ್ದೆಗಳನ್ನು ಹಂಚಿಕೆ ಮಾಡಬೇಕು. ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ಪದ್ಧತಿಯಂತೆ ನೇಮಕಾತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದ ಶಿವಪ್ರಕಾಶ ಮಹಾರಾಜ, ಕಿರಣ್, ಶರತ್, ಎಲ್.ಬಿ. ಹಾಲೇಶನಾಯ್ಕ, ಎಲ್. ಮಂಜನಾಯ್ಕ, ಬಿ. ಹಾಲೇಶನಾಯ್ಕ, ಕೊರಚ ಸಮಾಜದ ಹೊನ್ನಪ್ಪ, ಪ್ರಸಾದ್ ಕಾವಡ ಹಾಗೂ ಭೋವಿ ಸಮಾಜದ ಮುಖಂಡರು ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor