Photo Credit: Wikimedia Commons

ಪಾಕಿಸ್ತಾನಿ ನೌಕೆಯೊಂದು ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ‘ಸ್ವೀಕರಿಸಲಾಗದ ಮತ್ತು ವೃತ್ತಿಪರವಲ್ಲದ ವರ್ತನೆಗಾಗಿ’ ಭಾರತವು ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನದ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಮಂಗಳವಾರ (ಸೆಪ್ಟೆಂಬರ್ 15) ನಡೆದ ಈ ಘಟನೆಯಲ್ಲಿ ಪಾಕಿಸ್ತಾನಿ ನೌಕೆಯ ವರ್ತನೆಯು, ‘ಸೇನಾ ಅಭ್ಯಾಸಗಳು, ಕವಾಯತುಗಳು ಮತ್ತು ಸೇನಾ ಚಲನವಲನಗಳ ಕುರಿತು ಮುಂಗಡ ಸೂಚನೆ ನೀಡುವ ಕುರಿತ’ ಭಾರತ ಮತ್ತು ಪಾಕಿಸ್ತಾನ ನಡುವಿನ 1991ರ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಭಾರತ ತಿಳಿಸಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನ ಕೂಡ ಭಾರತೀಯ ಹೈಕಮಿಷನ್ನ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ ಮಾತುಕತೆ ನಡೆಸಿದೆ.

►ಸಮುದ್ರದಲ್ಲಿ ವಾಸ್ತವವಾಗಿ ನಡೆದದ್ದು ಏನು?

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಪಾಕಿಸ್ತಾನಿ ನೌಕಾಪಡೆಯ ‘ಪಿಎನ್ಎಸ್ ಹುನೈನ್’ (PNS Hunain) ನೌಕೆಯು ಅಂತರರಾಷ್ಟ್ರೀಯ ಜಲಸಂಧಿಯಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆಯತ್ತ ಅತಿ ವೇಗವಾಗಿ ಬಂದು, ಅಪಾಯಕಾರಿ ರೀತಿಯಲ್ಲಿ ಚಲಾಯಿಸಿದ ಕಾರಣ ಸಣ್ಣದೊಂದು ಡಿಕ್ಕಿ ಸಂಭವಿಸಿದೆ. ಒಮಾನ್ ಕೊಲ್ಲಿಯಿಂದ ಸುಮಾರು 120 ನಾಟಿಕಲ್ ಮೈಲಿ (1 ನಾಟಿಕಲ್ ಮೈಲಿ ಎಂದರೆ 1.852 ಕಿಲೋಮೀಟರ್) ದೂರದಲ್ಲಿ ಈ ಘಟನೆ ನಡೆದಿದೆ. ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದದ ಪ್ರಕಾರ, ಯಾವುದೇ ದೇಶದ ಪ್ರಾದೇಶಿಕ ಸಮುದ್ರವು ಅದರ ಕರಾವಳಿಯಿಂದ 12 ನಾಟಿಕಲ್ ಮೈಲಿಗಳವರೆಗೆ ವಿಸ್ತರಿಸಿರುತ್ತದೆ. ಆದರೆ, ಭಾರತದ ವಿಶೇಷ ಆರ್ಥಿಕ ವಲಯವು (EEZ) 200 ನಾಟಿಕಲ್ ಮೈಲಿಗಳವರೆಗೆ ಹಬ್ಬಿದ್ದು, ಈ ಪ್ರದೇಶದಲ್ಲಿ ಸಮುದ್ರದ ತಳದ ಸಂಪನ್ಮೂಲಗಳನ್ನು ಪರಿಶೋಧಿಸುವ ಮತ್ತು ನಿರ್ವಹಿಸುವ ಹಕ್ಕು ಭಾರತಕ್ಕೆ ಇದೆ.

ಉತ್ತರ ಅರೇಬಿಯನ್ ಸಮುದ್ರದಲ್ಲಿ ಭಾರತೀಯ ಯುದ್ಧನೌಕೆಯು ದಿನನಿತ್ಯದ ಕಣ್ಗಾವಲು ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ಡಿಕ್ಕಿಯಿಂದಾಗಿ ‘ಪಿಎನ್ಎಸ್ ಹುನೈನ್’ ನೌಕೆಗೆ ಹಾನಿಯಾಗಿದೆ. ಆದರೆ ಭಾರತೀಯ ನೌಕೆಗೆ ಯಾವುದೇ ಹಾನಿಯಾಗಿಲ್ಲ ಮತ್ತು ಅದು ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ತಮ್ಮ ನೌಕಾಪಡೆಯು ‘ಸೀಸ್ಪಾರ್ಕ್-26’ (SEASPARK-26) ದ್ವೈವಾರ್ಷಿಕ ಸಮರಾಭ್ಯಾಸದಲ್ಲಿ ನಿರತವಾಗಿದ್ದಾಗ, ಭಾರತೀಯ ನೌಕೆಯು ಪಾಕಿಸ್ತಾನಿ ನೌಕೆಯ ಅತ್ಯಂತ ಹತ್ತಿರದಲ್ಲಿ ಅಪಾಯಕಾರಿ ರೀತಿಯಲ್ಲಿ ಆಕ್ರಮಣಕಾರಿ ಚಲನವಲನಗಳನ್ನು ನಡೆಸಿತು, ಇದರಿಂದಾಗಿ ಎರಡೂ ನೌಕೆಗಳ ನಡುವೆ ಡಿಕ್ಕಿ ಸಂಭವಿಸಿತು ಎಂದು ಪಾಕಿಸ್ತಾನ ಸರ್ಕಾರದ ಹೇಳಿಕೆ ತಿಳಿಸಿದೆ. ಅಲ್ಲದೆ, ಅದು 1991ರ ಒಪ್ಪಂದವನ್ನೂ ಉಲ್ಲೇಖಿಸಿದೆ.

ಭಾರತ ಮತ್ತು ಪಾಕಿಸ್ತಾನಿ ನೌಕಾಪಡೆಗಳ ನಡುವೆ ಸಮುದ್ರದಲ್ಲಿ ಈ ಹಿಂದೆ ಇದೇ ರೀತಿಯ ಘಟನೆಯು 2011ರ ಜೂನ್ 16ರಂದು ನಡೆದಿತ್ತು. ಅಂದು ಅಡೆನ್ ಕೊಲ್ಲಿಯಲ್ಲಿ ಪಾಕಿಸ್ತಾನಿ ನೌಕಾಪಡೆಯ ಯುದ್ಧನೌಕೆ ‘ಪಿಎನ್ಎಸ್ ಬಾಬುರ್’ (PNS Babur), ಭಾರತೀಯ ನೌಕಾಪಡೆಯ ‘ಐಎನ್ಎಸ್ ಗೋದಾವರಿ’ (INS Godavari) ನೌಕೆಯ ಬಳಿಯಿಂದ ಹಾಯ್ದು ಹೋಗುವಾಗ ಸಣ್ಣದಾಗಿ ತಾಗಿಕೊಂಡಿದ್ದರಿಂದ, ಭಾರತೀಯ ಯುದ್ಧನೌಕೆಯ ಹೆಲಿಕಾಪ್ಟರ್ ಸುರಕ್ಷತಾ ಜಾಲಕ್ಕೆ ಸಣ್ಣಪುಟ್ಟ ಹಾನಿಯಾಗಿತ್ತು.

►ಸೇನಾ ಅಭ್ಯಾಸಗಳು ಮತ್ತು ಸೈನ್ಯದ ಚಲನವಲನಗಳ ಕುರಿತು ಮುಂಗಡ ಸೂಚನೆ ನೀಡುವ ಕುರಿತ 1991ರ ಭಾರತ-ಪಾಕಿಸ್ತಾನ ಒಪ್ಪಂದದಲ್ಲೇನಿದೆ?

ಒಪ್ಪಂದದ ಪಠ್ಯದ ಪ್ರಕಾರ, ಎರಡೂ ದೇಶಗಳ ಸೈನ್ಯದ ಉದ್ದೇಶಗಳನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವುದರಿಂದ ಉದ್ಭವಿಸಬಹುದಾದ ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಡೆಯಲು, ಸೈನ್ಯದ ಚಲನವಲನಗಳು ಅಥವಾ ಸೇನಾ ಅಭ್ಯಾಸಗಳ ಬಗ್ಗೆ ಪರಸ್ಪರ ಮಾಹಿತಿ ನೀಡಲು ಒಂದು ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇದು ಎರಡೂ ದೇಶಗಳ ಭೂ, ನೌಕಾ ಮತ್ತು ವಾಯುಪಡೆಗಳಿಗೆ ಕೆಲವು ನಿಯಮಗಳನ್ನು ರೂಪಿಸುತ್ತದೆ. ಪರಸ್ಪರರ ಗಡಿಯ ಹತ್ತಿರ ದೊಡ್ಡ ಮಟ್ಟದ ಸೇನಾ ಅಭ್ಯಾಸಗಳನ್ನು ಮಾಡುವುದನ್ನು ಆದಷ್ಟು ತಪ್ಪಿಸಬೇಕು. ಒಂದು ವೇಳೆ ಅಂತಹ ಅಭ್ಯಾಸಗಳನ್ನು ನಡೆಸುವುದಾದರೆ, ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು ಮತ್ತು ಆ ಬಗ್ಗೆ ಎದುರಾಳಿ ದೇಶಕ್ಕೆ ಮುಂಚಿತವಾಗಿ ತಿಳಿಸಬೇಕು ಎಂದು ಇದು ಹೇಳುತ್ತದೆ.

ನೌಕಾಪಡೆಗಳ ವಿಷಯಕ್ಕೆ ಬಂದರೆ, ‘ವಿನಾಶಕ ಅಥವಾ ಫ್ರಿಗೇಟ್ ಗಾತ್ರದ ಅಥವಾ ಅದಕ್ಕಿಂತ ದೊಡ್ಡದಾದ ಆರು ಅಥವಾ ಹೆಚ್ಚಿನ ಹಡಗುಗಳು ಒಟ್ಟಾಗಿ ಸೇನಾ ಅಭ್ಯಾಸ ನಡೆಸುತ್ತಾ, ಮತ್ತೊಂದು ದೇಶದ ವಿಶೇಷ ಆರ್ಥಿಕ ವಲಯವನ್ನು ಪ್ರವೇಶಿಸುವುದನ್ನು’ ದೊಡ್ಡ ಮಟ್ಟದ ಅಭ್ಯಾಸ ಎಂದು ವ್ಯಾಖ್ಯಾನಿಸಲಾಗಿದೆ.

‘ಅಂತರರಾಷ್ಟ್ರೀಯ ಜಲಸಂಧಿಯಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ಅಪಘಾತಗಳನ್ನು ತಪ್ಪಿಸಲು, ಎರಡೂ ದೇಶಗಳಿಗೆ ಸೇರಿದ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿಗಳು ಪರಸ್ಪರ ಮೂರು ನಾಟಿಕಲ್ ಮೈಲಿಗಳಿಗಿಂತ ಹತ್ತಿರಕ್ಕೆ ಬರುವಂತಿಲ್ಲ’ ಎಂದು ಹೇಳುತ್ತದೆ ಭಾರತ ಸರ್ಕಾರವು ನಿರ್ದಿಷ್ಟವಾಗಿ ಉಲ್ಲೇಖಿಸಿರುವ 10ನೇ ವಿಧಿ. ಸೆಪ್ಟೆಂಬರ್ 15ರಂದು ನಡೆದ ಘಟನೆಯಲ್ಲಿ ಈ ನಿಯಮವನ್ನೇ ಉಲ್ಲಂಘಿಸಲಾಗಿದೆ ಎಂದು ಭಾರತ ಹೇಳಿದೆ.

ವಿಮಾನಗಳಿಗೆ ಸಂಬಂಧಿಸಿದ ನಿಯಮಗಳು ಹೀಗಿವೆ– ‘ಫೈಟರ್ ಜೆಟ್, ಬಾಂಬರ್, ಕಣ್ಗಾವಲು ವಿಮಾನ, ಜೆಟ್ ತರಬೇತಿ ವಿಮಾನ ಮತ್ತು ಸಶಸ್ತ್ರ ಹೆಲಿಕಾಪ್ಟರ್ ಗಳು ಸೇರಿದಂತೆ ಯುದ್ಧ ವಿಮಾನಗಳು ಪರಸ್ಪರರ ವಾಯುಪ್ರದೇಶದ ಹತ್ತು ಕಿಲೋಮೀಟರ್ ಒಳಗೆ ಹಾರುವಂತಿಲ್ಲ.’ ಆದರೆ, ಭಾರತದ ಕಡೆಯಿಂದ ಜಮ್ಮು, ಪಠಾಣ್ ಕೋಟ್, ಅಮೃತಸರ ಮತ್ತು ಸೂರತ್ ಗಢ ವಾಯುನೆಲೆಗಳಿಂದ ಹಾಗೂ ಪಾಕಿಸ್ತಾನದ ಕಡೆಯಿಂದ ಪಸ್ರೂರ್, ಲಾಹೋರ್, ವೆಹಾರಿ ಮತ್ತು ರಹೀಮ್ಯಾರ್ ಖಾನ್ ವಾಯುನೆಲೆಗಳಿಂದ ವಿಮಾನಗಳು ಕಾರ್ಯನಿರ್ವಹಿಸುವ ಸಂದರ್ಭಗಳಲ್ಲಿ, ಅವು ಪರಸ್ಪರರ ವಾಯುಪ್ರದೇಶದಿಂದ ಐದು ಕಿಲೋಮೀಟರ್ ದೂರವನ್ನು ಕಾಯ್ದುಕೊಳ್ಳಬೇಕು ಎಂದು ಈ ನಿಯಮಗಳು ಸೂಚಿಸುತ್ತವೆ.

►ಈ ಒಪ್ಪಂದಕ್ಕೆ ಸಹಿ ಹಾಕಲು ಕಾರಣವೇನು?

ಹಿಂದಿನ ದಶಕದಲ್ಲಿ ನಡೆದ ಭೀಕರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಸಂಪೂರ್ಣವಾಗಿ ಸೋಲಿಸಿದ ನಂತರ, 1980ರ ದಶಕದಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ ಕೆಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಇದಕ್ಕೆ ಮುಖ್ಯ ಕಾರಣಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡೂ ದೇಶಗಳಲ್ಲಿ ಪರಮಾಣು ಅಸ್ತ್ರ ನಿರ್ಮಿಸುವ ಚಟುವಟಿಕೆಗಳು ತೀವ್ರಗೊಂಡಿದ್ದು, ಯುದ್ಧದ ದುಬಾರಿ ಪರಿಣಾಮಗಳನ್ನು ವಿಪರೀತವಾಗಿ ಹೆಚ್ಚಿಸಿದ್ದವು. ಜೊತೆಗೆ, 1979ರ ಡಿಸೆಂಬರ್ ನಲ್ಲಿ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಇದು ಭಾರತದೊಂದಿಗಿನ ಪಾಕಿಸ್ತಾನದ ಪೂರ್ವ ಗಡಿಯಲ್ಲಿ ಯಾವುದೇ ರೀತಿಯ ಅಶಾಂತಿ ಉಂಟಾಗದಂತೆ ತಡೆಯಲು ಪಾಕಿಸ್ತಾನ ಮತ್ತು ಅಮೆರಿಕ ಎರಡಕ್ಕೂ ಆಸಕ್ತಿ ಮೂಡುವಂತೆ ಮಾಡಿತ್ತು.

ಹೀಗಾಗಿ, 1983ರ ಮಾರ್ಚ್ 10ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಜಂಟಿ ಆಯೋಗವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನಂತರ 1988ರ ಡಿಸೆಂಬರ್ 31ರಂದು ಎರಡು ಪ್ರಮುಖ ಒಪ್ಪಂದಗಳು ಅಂತಿಮಗೊಂಡವು. ಅವುಗಳೆಂದರೆ, ಭಾರತ-ಪಾಕಿಸ್ತಾನ ನಡುವಿನ ಸಾಂಸ್ಕೃತಿಕ ಸಹಕಾರ ಒಪ್ಪಂದ ಹಾಗೂ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ನಿಷೇಧಿಸುವ ಒಪ್ಪಂದ.

1987ರ ಜನವರಿಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಭಾರತವು ನಡೆಸಿದ ಬೃಹತ್ ಸೇನಾ ಅಭ್ಯಾಸವಾದ ‘ಬ್ರಾಸ್ ಟ್ಯಾಕ್ಸ್ IV’ ನಡೆಯಿತು. ಇದಾದ ನಂತರ 1991ರ ಈ ಒಪ್ಪಂದವು ರೂಪುಗೊಂಡಿತು.

1986ರ ಬೇಸಿಗೆಯಲ್ಲಿ ಆರಂಭವಾದ ನಾಲ್ಕು ಹಂತದ ಸರಣಿ ಅಭ್ಯಾಸಗಳ ಕೊನೆಯ ಭಾಗ ಇದಾಗಿತ್ತು. ಇದರಲ್ಲಿ ಭಾರತದ ಎರಡು ಶಸ್ತ್ರಸಜ್ಜಿತ ವಿಭಾಗಗಳು ಮತ್ತು ಒಂದು ಯಾಂತ್ರಿಕೃತ ವಿಭಾಗ ಸೇರಿದಂತೆ ಎರಡು ವಿರೋಧಿ ಕಾರ್ಪ್ಸ್ ಮಟ್ಟದ ಪಡೆಗಳು ಭಾಗವಹಿಸಿದ್ದವು. ಈ ಅಭ್ಯಾಸದ ಜೊತೆಗೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಯು ಏಕಕಾಲದಲ್ಲಿ ಸಮರಾಭ್ಯಾಸಗಳನ್ನು ನಡೆಸಿದ್ದವು. ಈ ಅಭ್ಯಾಸಕ್ಕಾಗಿ ಸುಮಾರು 150,000 ಸೈನಿಕರನ್ನು ನಿಯೋಜಿಸಲಾಗಿತ್ತು ಎಂದು 1987ರ ಮಾರ್ಚ್ 6ರ ‘ನ್ಯೂಯಾರ್ಕ್ ಟೈಮ್ಸ್’ ವರದಿ ತಿಳಿಸಿದೆ.

‘ಇದು ಮೂರನೇ ಜಗತ್ತಿನ ಸೈನ್ಯವಲ್ಲ... ಇದು ಯಾವುದೇ ಕಾರ್ಯಾಚರಣೆಗೂ ಸಮರ್ಥವಾಗಿರುವ ಆಧುನಿಕ ಸೈನ್ಯವಾಗಿದ್ದು, ಚೀನಾ, ಕೊರಿಯಾ ಅಥವಾ ಫ್ರಾನ್ಸ್ ದೇಶಗಳ ಸೈನ್ಯದಷ್ಟೇ ಅತ್ಯುತ್ತಮವಾಗಿದೆ’ ಎಂದು ಪಾಶ್ಚಾತ್ಯ ರಾಜತಾಂತ್ರಿಕರೊಬ್ಬರು ಹೇಳಿರುವುದನ್ನು ಆ ವರದಿ ಉಲ್ಲೇಖಿಸಿದೆ.

ಈ ಅಭ್ಯಾಸದ ಬೃಹತ್ ಪ್ರಮಾಣವು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿತು.

ಆದ್ದರಿಂದ, ಇಂತಹ ಅನಿಶ್ಚಿತತೆಯನ್ನು ತಗ್ಗಿಸಲು 1991ರ ಒಪ್ಪಂದವು ಕೆಲವು ವ್ಯವಸ್ಥೆಗಳನ್ನು ರೂಪಿಸಿತು. ಅಭ್ಯಾಸದ ಗಾತ್ರ ಮತ್ತು ಸ್ವರೂಪಕ್ಕೆ ತಕ್ಕಂತೆ, ಭಾರತ ಮತ್ತು ಪಾಕಿಸ್ತಾನವು ಮುಂಚಿತವಾಗಿ ಮಾಹಿತಿ ನೀಡಬೇಕಿತ್ತು. ಕೆಲವು ವಾಯು ಮತ್ತು ನೌಕಾ ಅಭ್ಯಾಸಗಳಿಗೆ 15 ದಿನಗಳ ಮುಂಚಿತವಾಗಿ, ಕಾರ್ಪ್ಸ್ ಮಟ್ಟದ ಅಭ್ಯಾಸಗಳಿಗೆ 60 ದಿನಗಳು ಮತ್ತು ಸೈನ್ಯ ಮಟ್ಟದ ಅಭ್ಯಾಸಗಳಿಗೆ 90 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ನಿಗದಿಪಡಿಸಲಾಯಿತು. ಅಲ್ಲದೆ, ಪಡೆಗಳ ಒಟ್ಟು ಸೇರುವಿಕೆ, ಅಭ್ಯಾಸದ ದಿಕ್ಕು, ವ್ಯಾಪ್ತಿ ಮತ್ತು ಅದರ ಅವಧಿಯ ಬಗ್ಗೆ ಸ್ಪಷ್ಟನೆ ಕೋರುವ ಹಕ್ಕನ್ನು ಈ ಒಪ್ಪಂದವು ಎರಡೂ ದೇಶಗಳಿಗೆ ನೀಡಿತ್ತು.

ಅದೇ ದಿನ, ಅಂದರೆ 1991ರ ಎಪ್ರಿಲ್ 6ರಂದು ಮತ್ತೊಂದು ಸಂಬಂಧಿತ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಾಯುಪ್ರದೇಶದ ಉಲ್ಲಂಘನೆಯನ್ನು ತಡೆಯುವ ಹಾಗೂ ಮಿಲಿಟರಿ ವಿಮಾನಗಳ ಹಾರಾಟ ಮತ್ತು ಭೂಸ್ಪರ್ಶಕ್ಕೆ ಅನುಮತಿ ನೀಡುವ ಕುರಿತ ಭಾರತ-ಪಾಕಿಸ್ತಾನ ಒಪ್ಪಂದವು ಅಂದೇ ಜಾರಿಗೆ ಬಂದಿತು.

ಸೌಜನ್ಯ: indianexpress. com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor