ಪಿವಿ ಸಿಂಧುಗೆ ಪುನರಾಗಮನದ ತಿರುವು ಸಿಕ್ಕಿದ್ದು ವಿರಾಟ್ ಕೊಹ್ಲಿ ಜೊತೆಗಿನ ಸಂಭಾಷಣೆ!

Update: 2026-07-21 15:53 IST

 ಪಿವಿ ಸಿಂಧು , ವಿರಾಟ್ ಕೊಹ್ಲಿ | Photo Credit : PTI 




ಪಿವಿ ಸಿಂಧು ಜಪಾನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಮರುನಿರ್ಮಿಸಿದ್ದಾರೆ. ಕ್ರೀಡೆಯಲ್ಲಿ ಸಂತೋಷವನ್ನು ಮರುಸಂಪಾದಿಸಿದ್ದಾರೆ. ತಮ್ಮ ಮೊದಲ ಸೂಪರ್ 750 ಪ್ರಶಸ್ತಿಯಲ್ಲಿ ಅವರು ಗೆಲುವು ಮತ್ತು ಸಂತೋಷ ಎರಡನ್ನೂ ಸಾಧಿಸಿದ್ದಾರೆ.


ರವಿವಾರದಂದು ಜಪಾನ್ ಓಪನ್ ಗೆದ್ದ ಪಿವಿ ಸಿಂಧು ಅವರ ಪುನರಾಗಮನಕ್ಕೆ ಬಹಳ ಹಿಂದೆಯೇ ಬೆಂಗಳೂರಿನಲ್ಲಿ ನಡೆದ ಶಾಂತ ಮತ್ತು ಮೊದಲೇ ಉದ್ದೇಶಿತವಲ್ಲದ ಸಭೆ ಅಡಿಪಾಯ ಹಾಕಿದೆ ಎನ್ನುವುದು ನಿಮಗೆ ಗೊತ್ತೆ? ಆ ಸಭೆಗೆ ಹಿಂದಿನ 24 ತಿಂಗಳುಗಳು ಸಿಂಧು ಅವರಿಗೆ ಬಹಳ ಕ್ರೂರವಾಗಿದ್ದವು. ಒತ್ತಡದ ಮುರಿತಗಳು, ಪ್ಯಾರಿಸ್ ಒಲಿಂಪಿಕ್ಸ್ನಿಂದ ಆರಂಭಿಕ ಘಟ್ಟದಲ್ಲೇ ನಿರ್ಗಮನ ಮೊದಲಾಗಿ ಗೆಲುವು ಮರೀಚಿಕೆಯಾಗಿತ್ತು. ಟೀಕಾಕಾರರು ಸಿಂಧು ಅವರ ಗೆಲುವಿನ ಅವಧಿ ಮುಗಿಯಿತು ಎಂದುಕೊಂಡಿದ್ದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹತಾಶ ಸ್ಥಿತಿಯಲ್ಲಿ ಟಾಪ್ ಸ್ಥಾನದಿಂದ ಕೆಳಗುರುಳುವ ಏಕಾಂತವನ್ನು ಅರ್ಥಮಾಡಿಕೊಳ್ಳುವವರನ್ನು ಹುಡುಕಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಕರೆ ಮಾಡಿದರು. ‘ಎಕ್ಸ್’ ಪೋಸ್ಟ್ನಲ್ಲಿ ಅವರು ವಿರಾಟ್ ಕೊಹ್ಲಿಗೆ ಇದೀಗ ಧನ್ಯವಾದ ಹೇಳಿದ್ದಾರೆ.

“ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತದಲ್ಲಿ ನಾನು ಅವರನ್ನು ಸಂಪರ್ಕಿಸಿದೆ. ಗಾಯಗಳು ಹೆಚ್ಚಾಗುತ್ತಿದ್ದವು ಮತ್ತು ಫಲಿತಾಂಶಗಳು ಬರುತ್ತಿರಲಿಲ್ಲ. ನನಗೆ ಅರ್ಥಮಾಡಿಕೊಳ್ಳುವ ಯಾರಾದರೂ ಬೇಕಿದ್ದರು” ಎಂದು ಪೋಸ್ಟ್ನಲ್ಲಿ ವಿವರಿಸಿದ್ದಾರೆ ಸಿಂಧು.

ವಿರಾಟ್ ಕೊಹ್ಲಿ ಅವರು ನಿಮಿಷಗಳೊಳಗೆ ಸಿಂಧು ಅವರ ಸಂದೇಶಕ್ಕೆ ಉತ್ತರಿಸಿದರು. ಮರುದಿನವೇ ತಮ್ಮ ಪತಿ ವೆಂಕಟ ದತ್ತ ಸಾಯಿ ಜೊತೆಗೆ ಅವರು ವಿರಾಟ್ ಕೊಹ್ಲಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಪತಿ ವೆಂಕಟ ದತ್ತ ಸಾಯಿ ಪುನರಾಗಮನದ ಹಂತದುದ್ದಕ್ಕೂ ಸಿಂಧು ಅವರಿಗೆ ಆಧಾರಸ್ತಂಭವಾಗಿದ್ದು, ಡೇಟಾದತ್ತ ಗಮನ ಹರಿಸಿ ಅವರ ಈಗಿನ ತಂಡವನ್ನು ಜೋಡಿಸಿದ್ದರು.

“ವಿರಾಟ್ ಕೊಹ್ಲಿ ಜೊತೆಗೆ ನಾವೇನು ಮಾತನಾಡಿದ್ದೇವೆ ಎನ್ನುವುದು ನಮ್ಮೊಳಗೇ ಇರುತ್ತದೆ. ಆದರೆ ನನಗೆ ಅಗತ್ಯವಿದ್ದ ಸಂದರ್ಭದಲ್ಲಿ ಅವರು ನಮ್ಮ ಜೊತೆಗಿದ್ದರು. ಅವರು ಹೆಚ್ಚೇನೂ ಹೇಳದೆ ಇದ್ದರೂ, ಅವರು ಹೇಳಿದ ಪ್ರತಿಯೊಂದು ವಾಕ್ಯವೂ ನಮ್ಮ ಜೊತೆಗಿತ್ತು. ಕೆಲವು ಸಂಭಾಷಣೆಗಳು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ. ಅಂತಹ ಸಂಭಾಷಣೆ ಅದಾಗಿತ್ತು” ಎಂದು ಸಿಂಧು ಪೋಸ್ಟ್ನಲ್ಲಿ ಬರೆದಿದ್ದಾರೆ.

ಕೊಹ್ಲಿ ಅವರ ಸಲಹೆ ಸರಳವಾಗಿತ್ತು. “ಪ್ರಶಸ್ತಿಗಳನ್ನು ಬೆನ್ನಟ್ಟುವುದನ್ನು ನಿಲ್ಲಿಸಿ. ಮತ್ತೆ ಆಟದಲ್ಲಿ ಸಂತೋಷವನ್ನು ಕಂಡುಕೊಳ್ಳಿ!”

ಸಿಂಧು ಅದನ್ನು ಅಕ್ಷರಶಃ ಅನುಸರಿಸಿದರು.

“ನಾನು ಮರೆತಿದ್ದ ದೊಡ್ಡ ವಿಷಯವೆಂದರೆ ಆಟದಲ್ಲಿ ಸಂತೋಷವನ್ನು ಕಂಡುಕೊಳ್ಳುವುದು. ಇಂದು ನಾನು ನಿಖರವಾಗಿ ಐದೂವರೆಗೆ ಏಳುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಟ್ರೋಫಿಗಳು ನನಗೆ ಮುಖ್ಯವಲ್ಲ, ಗೆಲುವೂ ಅಲ್ಲ. ಇನ್ನೂ ಆಳವಾದುದೇನೋ ಬೇಕಿದೆ” ಎಂದು ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ.

ಆದರೆ ಕಳೆದ ರವಿವಾರದಂದು ಅವರು ನಿರೀಕ್ಷಿಸದ ಸಂತೋಷವೂ ದೊರೆತಿದೆ. ಸಿಂಧು ಅವರು ಜಪಾನ್ ನಲ್ಲಿ ಆತಿಥೇಯ ರಾಷ್ಟ್ರದ ಗೆಲುವಿನ ನೆಚ್ಚಿನ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-17 ಮತ್ತು 21-17ರ ಸೆಟ್ ಗಳಲ್ಲಿ ಸೋಲಿಸಿ, ಜಪಾನ್ ಓಪನ್ ಗೆದ್ದ ಮೊದಲ ಭಾರತೀಯರೆನ್ನುವ ಖ್ಯಾತಿ ಗಳಿಸಿದ್ದಾರೆ.

ಅವರು ಮತ್ತೆ ಮೈದಾನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 11-11 ಮತ್ತು 17-17ರ ಹೋರಾಟದ ಹಂತದಲ್ಲೂ ಗೆಲುವನ್ನು ಸಾಧಿಸಿದರು. ಸ್ಪರ್ಧೆಯ ಸಂದರ್ಭದಲ್ಲಿ ಸಿಂಧು ಒಂದೇ ಕ್ಷಣವೂ ವಿಚಲಿತರಾಗಲಿಲ್ಲ. ಆಟದಲ್ಲಿ ಸಂಪೂರ್ಣವಾಗಿ ಲೀನವಾಗಿದ್ದರು.

ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿದ ನಂತರ ಅವರು ಡಾ. ದಿನ್ಶಾ ಪಾರ್ಡಿವಾಲ ಅವರನ್ನು ಭೇಟಿಯಾದರು. ಗಾಯಗಳು ಗುಣವಾಗಬೇಕೆಂದರೆ ಸಿಂಧು ಅವರು ಮೂರು ತಿಂಗಳು ಸಂಪೂರ್ಣ ವಿಶ್ರಾಂತಿ ಪಡೆದರು. ಆದರೆ ಮರಳಿ ಮೈದಾನಕ್ಕೆ ಇಳಿಯುವುದು ಯಾವಾಗ ಎಂದು ಅವರು ಪದೇಪದೇ ಕೇಳುತ್ತಿದ್ದರು. ವೈದ್ಯರು ದತ್ತಾ ಅವರಿಗೆ ಒಂದೇ ಮಾತು ಹೇಳಿದರು.

“ಮೂರು ವಾರಗಳಲ್ಲಿ ಮರಳಿ ಮೈದಾನಕ್ಕೆ ಇಳಿಯುವುದು ಸಾಧ್ಯವಿಲ್ಲ. ಆಕೆಗೆ ವಿರಾಮದ ಅಗತ್ಯವಿದೆ. ಇಲ್ಲದಿದ್ದರೆ ಸುಸ್ತಾಗಿ ಹೋಗಲಿದ್ದಾರೆ!”

“ಆಕೆಯ ಸಂತೋಷವನ್ನು ಮರಳಿ ತರಬೇಕಿದೆ” ಎನ್ನುವ ವಿರಾಟ್ ಕೊಹ್ಲಿ ಅವರ ಮಾತುಗಳು ದತ್ತಾ ಅವರನ್ನು ಕೊರೆಯುತ್ತಲೇ ಇತ್ತು. ನಂತರ ಸಿಂಧು ಅಟ್ಲಾಂಟಾದ ಎಕ್ಸೊಸ್ ಸ್ಪೋರ್ಟ್ಸ್ ಪರ್ಫಾರ್ಮೆನ್ಸ್ ಫೆಸಿಲಿಟಿಯಲ್ಲಿ ಮೂವರು ಅದ್ಭುತ ತರಬೇತುದಾರರಾದ ವೇಯ್ನ್, ಟಿಮ್ ಮತ್ತು ರೇಯನ್ ಅವರೊಂದಿಗೆ ತರಬೇತಿ ಪಡೆದರು.

“ನನ್ನ ಸಹೋದರಿ ಅಮು ಅಟ್ಲಾಂಟಾದಲ್ಲಿ ನೆಲೆಸಿದ್ದಾರೆ. ಮೂರು ವಾರಗಳ ಕಾಲ ಸಿಂಧು ಅವರನ್ನು ಆಕೆಯೇ ತರಬೇತಿ ಕೇಂದ್ರಕ್ಕೆ ನಿತ್ಯವೂ ಜೊತೆಗೆ ಕರೆದೊಯ್ಯುತ್ತಿದ್ದರು. ಕುಟುಂಬದ ಜೊತೆಗಿರುವ ಸಂತೋಷವೂ ನಮಗಿತ್ತು” ಎನ್ನುತ್ತಾರೆ ದತ್ತಾ.

ದತ್ತಾ ಅವರು ಸಿಂಧು ಅವರಿಗೆ ಹೊಸ ತಂಡವನ್ನು ಕಟ್ಟಿದರು. ಡೇಟಾ ವಿಶ್ಲೇಷಣೆಯಲ್ಲಿ ಹೆಚ್ಚು ನಂಬುವ ದತ್ತಾ, 30ರ ವಯಸ್ಸಿನ ಅಥ್ಲೀಟ್ ಗಳಿಗೆ ನೆರವಾಗುವಂತಹ ಪರಿಣತರನ್ನು ಸಂಪರ್ಕಿಸಿದರು. ಹೀಗೆ ಮೂರನೇ ಬಾರಿ ಮೈದಾನಕ್ಕೆ ಪುನರಾಗಮನದ ಯಶಸ್ಸನ್ನು ಸಿಂಧು ಅವರು ಪ್ರಶಸ್ತಿ ಗೆಲ್ಲುವ ಮೂಲಕ ಸಾಧಿಸಿದ್ದಾರೆ. ಮುಖ್ಯವಾಗಿ ತಮ್ಮ ಫಿಟ್ನೆಸ್, ವೇಗ ಮತ್ತು ಸಾಮರ್ಥ್ಯದಲ್ಲಿದ್ದ ಆತ್ಮವಿಶ್ವಾಸದ ಕೊರತೆಯನ್ನು ಅವರು ನೀಗಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News