ಪೊಲೀಸ್ ಠಾಣೆ ಕಟ್ಟಣ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ: ಶಾಸಕ ತುನ್ನೂರ
ಯಾದಗಿರಿ: ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಗೃಹ ಇಲಾಖೆಯಿಂದ ಸೈಬರ್ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ, ಆದರೆ ಕಛೇರಿ ಕಟ್ಟಡದ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ ಹೊಸ ಸೈಬರ್ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣದಿಂದ ಬರುವ ದಿನಗಳಲ್ಲಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಗ್ರಾಮೀಣ ಪೊಲೀಸ್ ಠಾಣೆ ಪಕ್ಕದಲ್ಲಿ ಅಂದಾಜು ೧.೩೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಸೈಬರ್ ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಾಗತಿಕ ಬದಲಾವಣೆಯ ಪರಿಣಾಮ ಇಂದು ನಾವೇಲ್ಲರೂ ಡಿಜಿಟಲ್ ತಂತ್ರಜ್ಞಾನ ಬಳಸಿ ಹಣ ವಹಿವಾಟು ಮಾಡುತ್ತಿದ್ದೇವೆ, ಆದರೆ ಕೆಲವು ಸಂದರ್ಭಗಳಲ್ಲಿ ಅನೇಕ ಅಪರಾಧಗಳು ಜರುಗುತ್ತಿವೆ, ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರೀಯಾಶೀಲವಾಗಿ ಕೆಲಸ ಮಾಡಿ, ವಂಚನೆಗೆ ಒಳಗಾದ ಜನರಿಗೆ ಸಾಧ್ಯವಾದಷ್ಟು ನ್ಯಾಯ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪೃಥ್ವಿಕ್ ಶಂಕರ್ ಆಗಮಿಸಿದ ನಂತರ ದಿನಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಹಾಗೂ ತಾಲ್ಲೂಕಾ ಕೇಂದ್ರಗಳಲ್ಲಿ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಪೂರ್ಣ ಸಿಸಿ ಟಿವಿ ಅಳವಡಿಕೆ ಮಾಡಿಸಿದ್ದಾರೆ, ಅಲ್ಲದೇ ಜಿಲ್ಲೆಯ ಗಡಿಭಾಗದ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಸಿಬ್ಬಂಧಿಗಳ ನಿಯೋಜನೆ ಮಾಡುವ ಮೂಲಕ ಅಪರಾಧ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಕಾಮಗಾರಿ ಕೈಗೊಳ್ಳಲಿರುವ ಗುತ್ತಿಗೆದಾರರು ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಸರ್ಕಾರದಿಂದ ಈಗಾಗಲೇ ಜಿಲ್ಲೆಯ ಪೊಲೀಸ್ ಇಲಾಖೆಗೆ ೭ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ, ಅದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಡಾಗ್ ಕ್ಯಾನಲ್ ಉದ್ಘಾಟನೆ ಮಾಡಲಾಗಿದೆ, ನಗರದಲ್ಲಿ ಸೈಬರ್ ಕ್ರೈಮ್ ಠಾಣೆ ನಿರ್ಮಾಣ, ವಡಗೇರಾ ತಾಲ್ಲೂಕಿನ ಬೆಂಡೆಬೆ.ಬಳಿಯಲ್ಲಿ ಹೊರ ಪೊಲೀಸ್ ಠಾಣೆ ಮತ್ತು ಸುರಪುರ ತಾಲ್ಲೂಕಿನ ಕೆಂಭಾವಿ ಪೊಲೀಸ್ ಠಾಣೆಯ ವಸತಿ ಗೃಹ ನಿರ್ಮಾಣ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.
ನಾನು ಜಿಲ್ಲೆಗೆ ಸೇವೆಗೆ ಆಗಮಿಸಿದ ಸಮಯದಲ್ಲಿ ಮೊದಲು ಇಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಹಂತ-ಹಂತವಾಗಿ ಪರಿಹಾರಕ್ಕೆ ಯತ್ನಿಸಿದ್ದೇನೆ, ಇಲಾಖೆಯಲ್ಲಿ ಕ್ರೀಯಾಶೀಲತೆ ಮೂಲಕ ಹೊಸ ಬದಲಾವಣೆ ತಂದಿದ್ದೇವೆ, ಹಲವಾರು ಅಕ್ರಮಗಳಿಗೆ ಕಡಿವಾಣ ಹಾಕಿದ ಆತ್ಮತೃಪ್ತಿ ನನಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಲಿಂಗರಾಜ ಮಾತನಾಡಿ ಕಾಮಗಾರಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಭರತ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಪುಗೌಡ ಪಾಟೀಲ್ ಹುಣಸಗಿ, ರಾಜಶೇಖರ ಬಳಿ, ತಾಯಪ್ಪ ಯಾದವ, ಬಾಬುಗೌಡ ಮಾಚನೂರ, ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಶ್ರೀದೇವಿ ಬಿರಾದಾರ, ಪಂಡಿತ ಸಾಗರ್, ಭೀಮಾಶಂಕರ್, ಕಾಶೀನಾಥರಡ್ಡಿ, ಶರಣಗೌಡ, ಮಂಜನಗೌಡ ಪಾಟೀಲ್, ಶ್ರೀಕಾಂತ, ಪೋಮಣ್ಣ ರಾಠೋಡ, ಗುತ್ತಿಗೆದಾರ ಮನೋಹರ ಸೇರಿದಂತೆ ಹಲವರು ಉಪಸ್ಥಿತರಿದ್ದರು.