ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಮಾಲಿಪಾಟೀಲ ಆಯ್ಕೆ

Update: 2026-08-08 18:34 IST

ಯಾದಗಿರಿ: ಜಿಲ್ಲಾ ವಕೀಲರ ಸಂಘದ 2026–27ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಸಿ.ಎಸ್. ಮಾಲಿಪಾಟೀಲ ಅವರು 30 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ನಾಗಭೂಷಣ ಬಿ. ಆಡಕಿ ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆದಿದ್ದು, ಬಳಿಕ ತಡರಾತ್ರಿಯವರೆಗೆ ಮತ ಎಣಿಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಎಸ್. ಮಾಲಿಪಾಟೀಲ ಅವರು 170 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಶಾಂತಪ್ಪ ಎಸ್. ಖಾನಳ್ಳಿ ಅವರು 140 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಯರಗೋಳ ಆಯ್ಕೆ :

ಉಪಾಧ್ಯಕ್ಷ ಸ್ಥಾನಕ್ಕೆ ದೇವೇಂದ್ರಪ್ಪ ಎಚ್. ಯರಗೋಳ ಅವರು 191 ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಶಶಿಧರ ಎಸ್. ಕಮತಗಿ 118 ಮತಗಳನ್ನು ಪಡೆದರು.

ಪ್ರಧಾನ ಕಾರ್ಯದರ್ಶಿಯಾಗಿ ಗೋವಿಂದ ಜಾಧವ್ ಆಯ್ಕೆ :

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಗೋವಿಂದ ಬಿ. ಜಾಧವ್ ಅವರು 156 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಯಂಕಟರೆಡ್ಡಿ 140 ಹಾಗೂ ಭೀಮಾಶಂಕರ 12 ಮತಗಳನ್ನು ಪಡೆದರು.

ಅವಿರೋಧ ಆಯ್ಕೆ :

ಮಹಿಳಾ ಉಪಾಧ್ಯಕ್ಷೆಯಾಗಿ ನಾಗರತ್ನ ಎಂ. ಅನಪುರ, ಜಂಟಿ ಕಾರ್ಯದರ್ಶಿಯಾಗಿ ದೇಶಮುಖ ಪ್ರಶಾಂತ, ಖಜಾಂಚಿಯಾಗಿ ವಿನೋದಕುಮಾರ ಜೈನ್ ಹಾಗೂ ಮಹಿಳಾ ಖಜಾಂಚಿಯಾಗಿ ಶ್ಯಾಮಾಲಾ ವಾರದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಒಟ್ಟು 337 ಸದಸ್ಯರ ಪೈಕಿ 314 ಸದಸ್ಯರು ಮತ ಚಲಾಯಿಸಿದ್ದು, ಚುನಾವಣೆ ಸುಸೂತ್ರವಾಗಿ ನಡೆಯಿತು. ಸಹಾಯಕ ಚುನಾವಣಾಧಿಕಾರಿಗಳಾಗಿ ವಿಜಯಾನಂದ ಎಸ್. ಯರಗೋಳ ಹಾಗೂ ಶಿವರಾಮರೆಡ್ಡಿ ವಿ. ಪಾಟೀಲ ಕಾರ್ಯನಿರ್ವಹಿಸಿದರು.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ವಿಜೇತರು, ವಕೀಲರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News