×
Ad

ಸುರಪುರ | ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ನಗರಸಭೆ ಎದುರು ಪ್ರತಿಭಟನೆ

Update: 2026-07-06 18:01 IST

ಸುರಪುರ : ಪಟ್ಟಣದ ದಿವಳಗುಡ್ಡದ ವಾರ್ಡ್ ಸಂಖ್ಯೆ 29ರಲ್ಲಿ ಖಾಸಗಿ ವ್ಯಕ್ತಿಯೊಬ್ಬ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ವಾರ್ಡ್ ಸಂಖ್ಯೆ 29ರಲ್ಲಿ ಸಾರ್ವಜನಿಕ ರಸ್ತೆಯ ಜಾಗವನ್ನು ಕಬಳಿಸಿ ಮನೆಯ ಮುಂದೆ ಕಟ್ಟೆ ನಿರ್ಮಿಸಿರುವುದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ತುರ್ತು ಸೇವೆಗಳಾದ ಅಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಶಾಲಾ ವಾಹನಗಳು ಒಳಪ್ರದೇಶಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ವಾಹನಗಳನ್ನು ಮನೆಗಳವರೆಗೆ ಕೊಂಡೊಯ್ಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಸಂಬಂಧಪಟ್ಟ ವ್ಯಕ್ತಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ರಸ್ತೆಯ ಮೇಲಿನ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಆಗ್ರಹಿಸಿದೆ.

ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅವರ ಮೂಲಕ ಸಲ್ಲಿಸಿದರು.

ಸಂಘಟನೆಯ ತಾ.ಅಧ್ಯಕ್ಷ ಮಲ್ಲಪ್ಪ ನಾಯಕ್ ಕಬಾಡಗೇರಾ, ಕಾರ್ಯಾಧ್ಯಕ್ಷ ಶಿವರಾಜ ವಗ್ಗಾರ್, ಕೃಷ್ಣ ಹಾವಿನ್, ಶಿವಕುಮಾರ್, ನಿಂಗಪ್ಪ ವಗ್ಗಾರ್, ಹಣಮಂತ ಶುಕ್ಲ,ವೀರೇಶ್ ರತ್ತಾಳ, ಗೋಣೆಪ್ಪ ಗೌಡ, ನಾಗರಾಜ್ ನಂಬಾ, ನಾಗಲಿಂಗ ಕರೆಗಾರ, ಹಣಮಂತ ಭಂಡಾರಿ, ನಿಂಗಪ್ಪ ಕರೆಗಾರ, ಮಾಳಪ್ಪ ವಗ್ಗಾರ್, ಮೆಹಬೂಬ್ ಖಾನಾಪುರ,ಮಹಮ್ಮದ್ ಖಾನಾಪುರ, ಮರೆಪ್ಪ ಕರೆಗಾರ,ಬಸ್ಸು, ರಂಗಪ್ಪ, ಚನ್ನಬಸವ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News