×
Ad

Yadgiri | ವಚನ ಸಾಹಿತ್ಯದ ವಚನಗುಮ್ಮಟ ಫ.ಗು.ಹಳಕಟ್ಟಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್

ವಚನ ಸಂರಕ್ಷಣಾ ದಿನಾಚರಣೆ

Update: 2026-07-02 18:04 IST

ಯಾದಗಿರಿ: ವಚನ ಸಾಹಿತ್ಯದ ಉಳಿವು, ಸಂರಕ್ಷಣೆ ಮತ್ತು ಪ್ರಸಾರಕ್ಕೆ ಡಾ. ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರವಾಗಿದ್ದು, ಅವರು ಸಮಾಜದ ವಚನಗುಮ್ಮಟ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಲಿಂಗೇರಿ ಕೊನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಮನೆ, ಮಠ ಹಾಗೂ ಜಗುಲಿಗಳಲ್ಲಿದ್ದ ತಾಡೋಲೆಗಳನ್ನು ಹುಡುಕಿ ಸಂಗ್ರಹಿಸಿ, ಅವುಗಳ ಅರ್ಥವನ್ನು ಬಿಡಿಸಿ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಕಾರ್ಯವನ್ನು ಹಳಕಟ್ಟಿಯವರು ಕೈಗೊಂಡರು. ಈ ಉದ್ದೇಶಕ್ಕಾಗಿ 1925ರಲ್ಲಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದ್ದು, ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ಸಂಕಷ್ಟ ಎದುರಾದಾಗ ತಮ್ಮ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ಜೀವನ ನಡೆಸಿದ ತ್ಯಾಗಮೂರ್ತಿ ಎಂದು ಸ್ಮರಿಸಿದರು.

ಸ್ವತಃ ಅಚ್ಚು ಜೋಡಿಸಿ, ಪೆಡಲ್ ತುಳಿದು ವಚನಗಳನ್ನು ಮುದ್ರಿಸಿ ಪ್ರಕಟಿಸಿದ ಅವರು, ಸುಮಾರು 250 ವಚನಕಾರರ ವಚನಗಳನ್ನು ಬೆಳಕಿಗೆ ತಂದರು. ಅವರ ಈ ಕಾರ್ಯಕ್ಕೂ ಮುನ್ನ ಕೇವಲ 50 ವಚನಕಾರರ ವಚನಗಳು ಮಾತ್ರ ಲಭ್ಯವಿದ್ದವು. ವಚನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಮೂಲ್ಯ ಎಂದು ಹೇಳಿದರು.

1880ರ ಜುಲೈ 2ರಂದು ಜನಿಸಿದ ಹಳಕಟ್ಟಿಯವರು ಬದುಕಿನುದ್ದಕ್ಕೂ ಸಾಮಾಜಿಕ, ಶೈಕ್ಷಣಿಕ, ವಚನ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಸತೀಶಕುಮಾರ್ ಹವಾಲ್ದಾರ ಮಾತನಾಡಿ, ವಿಜಯಪುರ ನಗರಸಭೆ ಅಧ್ಯಕ್ಷರಾಗಿದ್ದ ವೇಳೆ ಹಳಕಟ್ಟಿಯವರು ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ಸಲಹೆಯೊಂದಿಗೆ ಭೂತನಾಳ ಕೆರೆಯನ್ನು ನಿರ್ಮಿಸಿ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ ದೂರದೃಷ್ಟಿಯ ನಾಯಕ ಎಂದು ಹೇಳಿದರು.

ಮುಂಬೈ ವಿಧಾನಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ಬರಗಾಲ ನಿವಾರಣೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರೆ, ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆಯ ಮೂಲಕ ಇಂದು ವಚನ ಸಾಹಿತ್ಯ ಸಂಶೋಧನೆ ಮತ್ತು ಪ್ರಕಟಣಾ ಕಾರ್ಯಗಳು ಮುಂದುವರಿದಿವೆ. ಅವರ ಜೀವಿತಾವಧಿಯಲ್ಲಿ ಪ್ರಕಟವಾದ ಸಾಹಿತ್ಯವನ್ನು 15 ಸಮಗ್ರ ಸಂಪುಟಗಳಲ್ಲಿ ಪ್ರಕಟಿಸಲಾಗಿದ್ದು, ಅವರ ಜನ್ಮದಿನವನ್ನು ಸರ್ಕಾರ ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಘೋಷಿಸಿರುವುದು ಅವರ ಸೇವೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುಡಾ ಅಧ್ಯಕ್ಷರಾದ ಬಾಬುರಾವ ಕಾಡ್ಲೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಉಪನ್ಯಾಸಕರಾದ ಬಸವರಾಜ ಜುಗೇರಿ, ಕಾಲೇಜಿನ ಪ್ರಾಂಶುಪಾಲರಾದ ಗುರುಪ್ಪಚಾರ್ಯ ಎಂ. ವಿಶ್ವಕರ್ಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News