Yadgiri | ಸೆಪ್ಟಿಕ್ ಟ್ಯಾಂಕ್ ನೀರು ರಸ್ತೆಗೆ; ಸಾಂಕ್ರಾಮಿಕ ರೋಗದ ಭೀತಿ
ಯಾದಗಿರಿ : ನಗರದ ಮಾತಮಾಣಿಕೇಶ್ವರಿ ಕಾಲೋನಿಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಅಬ್ದುಲ್ ಕಲಾಂ ವಿದ್ಯಾರ್ಥಿ ನಿಲಯದ ಹಿಂಭಾಗದ ಸೆಪ್ಟಿಕ್ ಟ್ಯಾಂಕ್ ತುಂಬಿ ಕಲುಷಿತ ನೀರು ರಸ್ತೆ ಹಾಗೂ ಖಾಲಿ ಜಾಗಕ್ಕೆ ಉಕ್ಕಿ ಹರಿಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಕಲುಷಿತ ನೀರು ಹರಿಯುತ್ತಿರುವ ಪರಿಣಾಮ ತೀವ್ರ ದುರ್ವಾಸನೆ ವ್ಯಾಪಿಸಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯಕ್ಕೆ ಅಪಾಯ ಉಂಟಾಗಿದ್ದು, ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಖಂಡ ರಾಷ್ಟ್ರ ಯುವ ಜನ ಸೇವಾ ಸಂಸ್ಥೆಯ ನಗರಾಧ್ಯಕ್ಷ ಭರತಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಕಲುಷಿತ ನೀರನ್ನು ತೆರವುಗೊಳಿಸಿ, ಸೆಪ್ಟಿಕ್ ಟ್ಯಾಂಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಯುವ ಮುಖಂಡರಾದ ತೇಜಸ ಹಿರೇಮಠ, ವಿನಯಕಟ್ಟಿ, ಅಶೋಕರೆಡ್ಡಿ ವಡ್ಡಡಗಿ, ಕಿರಣಕುಮಾರ, ಪ್ರೀತಂ, ಅಂಕಿತ್, ಸೂರಜ್ ಪೂಜಾರಿ, ಕುಮಾರ್ ಆದಿತ್ಯ, ವಿನಾಯಕ ಹವಾಲ್ದಾರ್, ಸಾಯಿನಾಥ್ ನಾಯಕ್, ರಾಜೇಶ್ ಬಿ.ಎಲ್., ದೇವರಾಜ್, ಮನೋಜ್ ಹುಬ್ಬಳ್ಳಿ ಹಾಗೂ ಗಣೇಶ್ ಮೋಟ್ಕರ್ ಉಪಸ್ಥಿತರಿದ್ದರು.