Yadgiri | ಸ್ಟಿಂಗ್ ಪೇಯ ಸೇವಿಸಿ ಯುವಕ ಮೃತ್ಯು ಆರೋಪ; ಬಾಟಲಿಗಳನ್ನು ಸುಟ್ಟು ಗ್ರಾಮಸ್ಥರಿಂದ ಆಕ್ರೋಶ
ಹುಣಸಗಿ: ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಸ್ಟಿಂಗ್ ಪೇಯ ಸೇವಿಸಿದ ಬಳಿಕ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಾಲು ಹಣಮಂತ ದೇಸಾಯಿ (19) ಎಂಬ ಯುವಕ ಮೃತಪಟ್ಟಿದ್ದು, ಆತ ಸ್ಟಿಂಗ್ ಪೇಯ ಸೇವಿಸಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ನಿವಾಸಿಗಳು ಸಭೆ ನಡೆಸಿ, ಇನ್ನು ಮುಂದೆ ಸ್ಟಿಂಗ್ ಸೇರಿದಂತೆ ಇತರೆ ಎನರ್ಜಿ ಪೇಯಗಳನ್ನು ಸೇವಿಸದಿರಲು ಹಾಗೂ ಗ್ರಾಮದಲ್ಲಿ ಮಾರಾಟ ಮಾಡದಿರಲು ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆಕ್ರೋಶಗೊಂಡ ಗ್ರಾಮಸ್ಥರು ನೂರಾರು ಸ್ಟಿಂಗ್ ಬಾಟಲಿಗಳನ್ನು ರಸ್ತೆಯ ಮೇಲೆ ಸುರಿದು, ಖಾಲಿ ಬಾಟಲಿಗಳಿಗೆ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿನ ಕಾರಣದ ಬಗ್ಗೆ ಸ್ಪಷ್ಟತೆ ಇಲ್ಲ :
ಯುವಕನ ಸಾವಿಗೆ ಸ್ಟಿಂಗ್ ಪೇಯವೇ ನೇರ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಕುರಿತು ವಿವಿಧ ರೀತಿಯ ಸುದ್ದಿಗಳು ಹರಡುತ್ತಿದ್ದರೂ, ವೈದ್ಯಕೀಯ ವರದಿ ಹಾಗೂ ಸಂಬಂಧಿತ ಅಧಿಕಾರಿಗಳ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.