ಶತಮಾನವನ್ನು ಕಂಡು ಮುನ್ನಡೆದಿರುವ ಮುದ್ರಣ ಮಾಧ್ಯಮ ಲೋಕ ಇಂದಿಗೂ ಜನಸಾಮಾನ್ಯರ ಆಪ್ತ ಬಂಧುವಿನಂತಿರುವುದು ಹೆಮ್ಮೆಪಡುವ ಸಂಗತಿ. ನಾಡು-ದೇಶ-ಸಮಾಜ ಮತ್ತು ಜನಸಮೂಹಗಳ ಹಿತಾಸಕ್ತಿ ವಿಚಾರದಲ್ಲಿ ಆದ್ಯತೆ ಕೊಟ್ಟು ಸಮಸ್ಯೆ-ಸಂಕಟಗಳನ್ನು ಆಡಳಿತಗಾರರ ಗಮನಕ್ಕೆ ತರುವಲ್ಲಿ, ಪರಿಹಾರ ಮಾರ್ಗವನ್ನು ರೂಪಿಸುವ ದಿಸೆಯಲ್ಲಿ ಕರ್ತವ್ಯ ನಿಷ್ಠೆ ಮೆರೆದಿರುವ ಪರಿ ಅಭೂತಪೂರ್ವವಾದುದು. ಇಂತಹ ಕರ್ತವ್ಯಪರತೆಯಲ್ಲೂ ಸಣ್ಣಪುಟ್ಟ ಲೋಪದೋಷಗಳಿರುವುದನ್ನು ಓದುಗ ಬಂಧುಗಳು ಗಮನಿಸುತ್ತಲೇ ಇರುವುದು ಕೂಡಾ ವಿಶೇಷವಾಗಿದೆ. ಪತ್ರಿಕಾ ನೀತಿಯೆಂಬುದನ್ನು ಪಕ್ಕಕ್ಕೆ ಸರಿಸಿ ದಾರಿ ಬದಲಾಯಿಸಿದ್ದನ್ನು ಗಮನಿಸುವ, ಅದರ ಬಗ್ಗೆ ಎಚ್ಚರಿಸುವ ಸೂಕ್ಷ್ಮ ಪ್ರಜ್ಞೆಯೂ ಶ್ರೀಸಾಮಾನ್ಯ ಓದುಗರಲ್ಲಿ ಬೆಳೆದು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಅಂತಹ ಕರ್ತವ್ಯ ನಿಷ್ಠೆಯನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿರುವ ಮಾಧ್ಯಮಗಳು ನಮ್ಮ ಕಲುಷಿತ ವಾತಾವರಣದಲ್ಲಿಯೂ ಉಳಿದುಕೊಂಡು ಬೆಳೆಯುತ್ತಲಿವೆ ಎಂಬುದು ಸಮಾಧಾನಕರ ಸಂಗತಿ. ಆ ಬಗೆಯ ಮಾಧ್ಯಮಗಳಲ್ಲಿ ವಾರ್ತಾಭಾರತಿ ಕನ್ನಡ ದಿನಪತ್ರಿಕೆಯೂ ಪ್ರಮುಖವಾದದ್ದಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ‘ವಾರ್ತಾಭಾರತಿ’ ಇಂದು 24 ವಸಂತಗಳ ಸಂಭ್ರಮದಲ್ಲಿದೆ ಎಂಬುದು ನಿಜಕ್ಕೂ ಕನ್ನಡ ಓದುಗರ ಪಾಲಿನ ಸಂಭ್ರವವೂ ಆಗಿದೆ ಎಂದು ಹೇಳ ಬಯಸುತ್ತೇನೆ.

ನಾಡಿನಲ್ಲಿ ಪ್ರಗತಿಪರ ಚಿಂತನೆಯ ಅಕ್ಷರ ಬೀಜ ಬಿತ್ತನೆ ಮಾಡುವಲ್ಲಿ ‘ವಾರ್ತಾಭಾರತಿ’ ಪ್ರಧಾನ ಪಾತ್ರ ವಹಿಸಿರುವುದನ್ನು ಕನ್ನಡ ಓದುಗ ಬಂಧುಗಳು ಗುರುತಿಸಿರುವುದು ಹೆಗ್ಗಳಿಕೆಯ ವಿಚಾರ. ಜಾತಿ-ಮತ-ಪಂಥಗಳ ಮರುಳು ಗುಂಗಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಗ್ಗಿಲ್ಲದೆ ನಡೆದಾಗ, ಅಂತಹ ಹಾದಿಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದು ಅಸಾಧಾರಣ ಸಂಗತಿಯಾಗುತ್ತದೆ. ಅದು ಸುಲಭವಾದದ್ದೂ ಅಲ್ಲ. ಆ ಸುಲಭವಲ್ಲದ ಹಾದಿಯನ್ನು ಸರಿಪಡಿಸುವ ಆಲೋಚನೆ ಮತ್ತು ಆಯೋಜನೆಯಲ್ಲಿ ಒಂದು ಮಾಧ್ಯಮ ತೊಡಗುವುದು ಹೆಮ್ಮೆಪಡುವಂತಹ ಆಂದೋಲನವೇ ಆಗಿರುತ್ತದೆ.

ವಾಸ್ತವವಾಗಿ ವಾರ್ತಾಭಾರತಿಯ ಸುದೀರ್ಘ 23 ವರ್ಷಗಳ ಹಾದಿಯನ್ನು ಗಮನಿಸಿದಾಗ ಯಾರಿಗಾದರೂ ಇದೊಂದು ಮಾದರಿಯ ಹೆಜ್ಜೆ ಅನ್ನಿಸದಿರದು. ಅದಕ್ಕೆ ದಿಟ್ಟತನ-ದೃಢತೆ- ಬದ್ಧತೆ ಬೇಕಾಗುತ್ತದೆ. ಪ್ರಕಾಶನ ಸಂಸ್ಥೆಯು ಅಂತಹುದನ್ನು ತನ್ನ ಕರ್ತವ್ಯವೆಂದು ಭಾವಿಸಿದ್ದು ಅಪೂರ್ವವಾದುದು. ಅದರಲ್ಲಿ ನಾಡು-ದೇಶ-ಜನತೆಯ ಸಾಮೂಹಿಕ ಹಿತ ಅಡಗಿದೆಯೆಂಬು ದನ್ನು ಅರಿತು ಅದು ಕಠಿಣತಮವಾಗಿದ್ದರೂ ಸಾಗಿ ಬಂದಿದ್ದು, ಸಾಗುತ್ತಿರುವುದು ಮೇಲ್ಪಂಕ್ತಿಯ ಮಾದರಿಯಾಗಿರುತ್ತದೆ.

24ನೇ ವಸಂತಕ್ಕೆ ಹೆಜ್ಜೆಯಿರಿಸಿರುವ ‘ವಾರ್ತಾಭಾರತಿ’ ಇಂದು ಸರಿಸುಮಾರು 25 ಲಕ್ಕಕ್ಕೂ ಮಿಗಿಲಾದ ಓದುಗರು ಮತ್ತು ವೀಕ್ಷಕರನ್ನು ಗಳಿಸಿಕೊಂಡಿದೆಯೆಂದರೆ, ಅದು ತುಳಿದ ಹಾದಿ ಸಮರ್ಪಕವಾಗಿದೆ ಎಂಬುದನ್ನು ಸಾಕ್ಷಿ ನುಡಿಯುತ್ತದೆ. ಪತ್ರಿಕೆ ಇದುವರೆಗೆ ಸವೆಸಿರುವ ಹಾದಿಯನ್ನು ಗಮನಿಸಿದಾಗ ಅದರ ಹಂತಹಂತದ ಬೆಳವಣಿಗೆ ರೋಚಕಕಾರಿಯಾಗಿರುವುದು ಅರ್ಥವಾಗುತ್ತದೆ.

2003ರಲ್ಲಿ ‘ವಾರ್ತಾಭಾರತಿ’ ತನ್ನ ಕಾರ್ಯಭಾರವನ್ನು ಆರಂಭಿಸಿ, ಕೇವಲ 3 ಜಿಲ್ಲೆಗಳ ವ್ಯಾಪ್ತಿಗೆ ಸೀಮಿತಗೊಂಡಿರುತ್ತದೆ. ಆದರೆ 2007ರ ಹೊತ್ತಿಗೆ ಬರೋಬ್ಬರಿ ಹೊಸದಾಗಿ 12 ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಪರಿ ಅದ್ಭುತವೆನಿಸುತ್ತದೆ. ಅಲ್ಲಿಂದ ಒಂದೇ ವರ್ಷದಲ್ಲಿ ಅಂದರೆ 2018ರಲ್ಲಿ ಮತ್ತೆ 4 ಜಿಲ್ಲೆಗಳಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳುವ ಪತ್ರಿಕೆ 2025ರ ಹೊತ್ತಿಗೆ ಮಗದೊಂದು ಎಂಬಂತೆ 6 ಜಿಲ್ಲೆಗಳಿಗೆ ವಿಸ್ತಾರಗೊಳ್ಳುವ ಪರಿ ವಿಶಿಷ್ಟವಾದುದು.

ಇಂದು ‘ವಾರ್ತಾಭಾರತಿ’ ಸರಿಸುಮಾರು ರಾಜ್ಯದ 25 ಜಿಲ್ಲೆಗಳಲ್ಲಿ ತಳವೂರಿ ತನ್ನದೇ ಆದ ಕನ್ನಡ ಓದುಗ ಬಳಗವನ್ನು ಸೃಷ್ಟಿಸಿಕೊಂಡಿರುವುದು ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ಈ ಹಾದಿಯ ಹಿನ್ನೆಲೆಯನ್ನು ಅರಿಯಲು ಪ್ರಯತ್ನಿಸಿದಾಗ ಎಲ್ಲೂ ಅದು ನಿಸ್ತೇಜತೆ ಅನುಭವಿಸಿದ ಹೆಜ್ಜೆ ಕಾಣಿಸುವುದಿಲ್ಲ. ಪ್ರತೀ ದಿನ ಮತ್ತು ಪ್ರತೀ ವಸಂತದ ಹೆಜ್ಜೆ ಮೂಡುವಲ್ಲಿ ಉತ್ಸಾಹದ ಬುಗ್ಗೆ ಕಾಣಿಸುತ್ತದೆ. ಅಂದರೆ ಪತ್ರಿಕೆಯ ಮುನ್ನಡೆ ಬಿರುಸಾಗಿ ಕಾಣಿಸುತ್ತದೆ. ಇದು ಭರವಸೆಯ ಬೆಳವಣಿಗೆ. ಬಲೂನ್ ಗಾಳಿಯ ಬೆಳವಣಿಗೆಯಲ್ಲ ಎಂಬುದು ಖಾತರಿಯಾಗುತ್ತದೆ.

2027ಕ್ಕೆ 25ನೇ ವರ್ಷಕ್ಕೆ ಕಾಲಿಡಲಿರುವ ವಾರ್ತಾ ಭಾರತಿ ತನ್ನ ಬೆಳ್ಳಿ ಉತ್ಸವದ ಸಂಭ್ರಮವನ್ನು ಕಾಣಲಿದೆಯೆಂಬುದು ಕನ್ನಡಿಗರ ಪಾಲಿನ ಹೆಮ್ಮೆಯಾಗಿದೆ. ಯಾವುದೇ ಹಂತದಲ್ಲೂ ತನ್ನ 12 ಪುಟಗಳ ಸುಂದರ ಮುದ್ರಣ, ಪತ್ರಿಕಾ ಧರ್ಮದ ಆಚೀಚೆ ಸರಿಯದ ನಿಲುವು, ವಿಚಾರ ಪ್ರಚೋದಕ ಬರಹಗಳ ಅಳವಡಿಕೆ, ಜನ-ನಾಡಪರವಾದ ಸೂಕ್ಷ್ಮಗ್ರಹಿಕೆಯ ಸಂಪಾದಕೀಯ, ಹದವರಿತ ಸುದ್ದಿ ವಿಶ್ಲೇಷಣೆ, ಪ್ರಗತಿ ಪರ ಆಲೋಚನಾ ಕ್ರಮದ ಪ್ರತಿಪಾದನೆ, ಹೊಸ ಚಿಂತನೆಯ ಬರಹಗಾರರಿಗೆ ಅವಕಾಶ-ಮುಂತಾಗಿ ತಾತ್ವಿಕ ನೆಲೆಗಟ್ಟಿನಲ್ಲಿ ಹೊರಟ ಪತ್ರಿಕೆಯ ಹಾದಿ ಅದ್ಭುತವಾಗಿದೆ.

‘ವಾರ್ತಾಭಾರತಿ’ ಪತ್ರಿಕೆಯ ಜೊತೆಜೊತೆಗೇ 24/7 ಯುಟ್ಯೂಬ್ ಕನ್ನಡ ನ್ಯೂಸ್ ಚಾನೆಲ್ ಅನ್ನೂ ಮುನ್ನಡೆಸಿಕೊಂಡು ಬರುತ್ತಿರುವುದು ಕನ್ನಡಿಗರ ಪಾಲಿಗೆ ಹೊಸ ಅನುಭವವಾಗಿದೆ. ಈಗ ‘english.varthabharati.in’ ಎಂಬ ಇಂಗ್ಲಿಷ್ ವಾಹಿನಿಯ ಅರಂಭಕ್ಕೂ ಸಜ್ಜುಗೊಳ್ಳುತ್ತಿರುವುದು ಸಂಸ್ಥೆಯ ದೊಡ್ಡ ಸಾಹಸವೇ ಆಗಿದೆ.

‘ವಾರ್ತಾ ಭಾರತಿ’ ತನ್ನ ಬೆಳ್ಳಿ ಮಹೋತ್ಸವದ ಸಂದರ್ಭಕ್ಕೆ ಕನ್ನಡಿಗರ ಬಹು ದೊಡ್ಡ ಸಂಸ್ಥೆಯಾಗಿ ವಿಜೃಂಭಿಸಬಲ್ಲದು. ಇಂತಹ ಪ್ರಗತಿಶೀಲ ಚಿಂತನೆಯ ಮುದ್ರಣ ಮಾಧ್ಯಮ ಮತ್ತು ಡಿಜಿಟಲ್ ವಾಹಿನಿಯನ್ನು ನಡೆಸುವ ಸಂಸ್ಥೆ ಸಮಸ್ತ ಕನ್ನಡಿಗರಿಗೆ ಹರ್ಷದಾಯಕ ಸಂಗತಿ ಎಂದು ಹೇಳಲು ಅಭಿಮಾನ ತುಂಬಿ ಬರುತ್ತದೆ. ಸಂಸ್ಥೆಯ ಎಲ್ಲ ಸಾಹಸಿ ಪ್ರಯತ್ನಗಳೂ ನೂರ್ಕಾಲ ಗಟ್ಟಿಯಾಗಿ ದಿಟ್ಟವಾಗಿ ತಳವೂರುತ್ತಾ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಾಣಗೆರೆ ವೆಂಕಟರಾಮಯ್ಯ

ಸಾಹಿತಿ, ಪತ್ರಕರ್ತ