ವೆನ್ಲಾಕ್ ಕ್ಯಾಥ್ಲ್ಯಾಬ್ ಶೀಘ್ರ ಆರಂಭಕ್ಕೆ ದ.ಕ. ಜಿಲ್ಲಾಧಿಕಾರಿ ಸೂಚನೆ
ಮಂಗಳೂರು : ಹೃದ್ರೋಗಕ್ಕೆ ಸಂಬಂಧಪಟ್ಟ ಉನ್ನತ ಚಿಕಿತ್ಸೆ ಒದಗಿಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣ ಗೊಂಡಿರುವ ಕ್ಯಾಥ್ಲ್ಯಾಬ್ ಘಟಕವನ್ನು ಶೀಘ್ರದಲ್ಲಿ ಕಾರ್ಯಚರಣೆಗೊಳಿಸುವಂತೆ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಸೂಚಿಸಿದ್ದಾರೆ.
ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಗುರುವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೆನ್ಲಾಕ್ ಹೊಸ ಸರ್ಜಿಕಲ್ ಕಟ್ಟಡದ ತಳ ಅಂತಸ್ತಿನಲ್ಲಿ ಸುಸಜ್ಜಿತ ಕ್ಯಾಥ್ಲ್ಯಾಬ್ ನಿರ್ಮಾಣಗೊಂಡಿದ್ದು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರು, ತಂತ್ರಜ್ಞಾನ ಸಿಬ್ಬಂದಿಗಳನ್ನು ಕೆಎಂಸಿ ವತಿಯಿಂದ ಒದಗಿಸಿ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಿದ್ಧಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರ ಸಾರ್ವಜನಿಕರ ಸೇವೆಗೆ ಕ್ಯಾಥ್ಲ್ಯಾಬ್ ದೊರಕಿಸಲು ಕ್ರಮ ಕೈಗೊಳ್ಳಲು ಅವರು ವೆನ್ಲಾಕ್ ಅಧೀಕ್ಷಕರಿಗೆ ಸೂಚಿಸಿದರು.
ವೆನ್ಲಾಕ್ನಲ್ಲಿ 35 ಹಾಸಿಗೆ ಸಾಮರ್ಥ್ಯದ ಹೊಸ ಡಯಾಲಿಸಿಸ್ ವಾರ್ಡ್ನ ಕಾಮಗಾರಿ ಪೂರ್ಣಗೊಂಡಿರುತ್ತದೆ. ಅಲ್ಲಿ ಅಗತ್ಯವಿರುವ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು. ವೆನ್ಲಾಕ್ ಕ್ರಿಟಿಕಲ್ ಕೇರ್ ಬ್ಲಾಕ್ನ ಕಾಮಗಾರಿ ಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಡಿಸಿ ಸೂಚಿಸಿದರು.
ವೆನ್ಲಾಕ್-ಮಿಲಾಗ್ರಿಸ್ ರಸ್ತೆಯ ಅಗಲೀಕರಣ ಕಾಮಗಾರಿ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದ ಡಿಸಿ, ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗುತ್ತಿರುವ ಬಗ್ಗೆ ಆಗಾಗ ಪರಿಶೀಲಿಸಲು ತಿಳಿಸಿದರು.
ಸಭೆಯಲ್ಲಿ ದ.ಕ.ಜಿಪಂ ಸಿಇಒ ನರ್ವಾಡೆ ನಾಯಕ್ ಕಾರ್ಬಾರಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಡಿಸಿಪಿ ರವಿಶಂಕರ್, ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಹಾಗೂ ಲೇಡಿಗೋಶನ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್, ಕೆಎಂಸಿ ಡೀನ್ ಉಣ್ಣಿಕೃಷ್ಣ್ಣನ್ ಮತ್ತಿತರರು ಉಪಸ್ಥಿತರಿದ್ದರು.
*ವೆನ್ಲಾಕ್ ಹೊಸ ಒಪಿಡಿ ಬ್ಲಾಕ್ ನಿರ್ಮಾಣ ಮಾಡಲು ಸರಕಾರದಿಂದ 70 ಕೋ.ರೂ. ಅನುದಾನ ಮಂಜೂರಾಗಿದೆ. ಈ ನಿಟ್ಟಿನಲ್ಲಿ ಒಪಿಡಿ ಬ್ಲಾಕ್ನಲ್ಲಿರುವ ಎಲ್ಲಾ ವಿಭಾಗಗಳನ್ನು ಟ್ರಾಮಾ ಬ್ಲಾಕ್ಗೆ ಸ್ಥಳಾಂತರಿಸಲು ಮತ್ತು ಈಗಿನ ಒಪಿಡಿ ಕಟ್ಟಡವನ್ನು ಸ್ಥಳಾಂತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
*ವೆನ್ಲಾಕ್ ಆಸ್ಪತ್ರೆ ಅಧೀನದಲ್ಲಿರುವ ಅತ್ತಾವರ ಗ್ರಾಮದ 2.71 ಎಕರೆ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಪಾವತಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಡಿಸಿ ಅನುಮತಿ ನೀಡಿದರು. ಆಸ್ಪತ್ರೆಯ ವಿವಿಧ ಭಾಗದ ಕಟ್ಟಡದಲ್ಲಿರುವ ರೋಗಿ ಗಳಿಗೆ ಆಹಾರ ಸರಬರಾಜು ಮಾಡಲು ಎಲೆಕ್ಟ್ರಿಕ್ ಬಗ್ಗಿ ವಾಹನ ಖರೀದಿಸಲು ನಿರ್ಣಯಿಸಲಾಯಿತು. ವೆನ್ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಯ ವಿವಿಧ ಖರ್ಚು ವೆಚ್ಚಗಳಿಗೆ ಅನುಮೋದನೆ ನೀಡಲಾಯಿತು.