ಪ್ರವಾದಿ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಕಮೆಂಟ್: ಸನಾತನಿ ಸಿಂಹ, ಚೇತನ್ ಹೊದ್ದೆಟ್ಟಿ ವಿರುದ್ಧ ದೂರು ದಾಖಲು
ಸುಳ್ಯ: ಧರ್ಮಸ್ಥಳದ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್ಐಟಿ ಶೋಧದ ವೇಳೆ ತಲೆ ಬುರುಡೆಗಳು ಮತ್ತು ಎಲುಬುಗಳು ದೊರೆತಿವೆ ಎಂಬ ಮಾಧ್ಯಮ ವರದಿಗೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶದಿಂದ ಕಾಮೆಂಟ್ ಮಾಡಿ ಅಶಾಂತಿ ಸೃಷ್ಟಿಸಿ ಕೋಮು ಗಲಭೆ ಹಬ್ಬುವ ಷಡ್ಯಂತ್ರ ಮಾಡಲು ಪ್ರಯತ್ನಿಸಿದ “ಸನಾತನಿ ಸಿಂಹ” ಫೇಸ್ಬುಕ್ ಪೇಜ್ ಹಾಗೂ ಚೇತನ್ ಹೊದ್ದೆಟ್ಟಿ ಎಂಬ ವ್ಯಕ್ತಿಯ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಳ್ಯ ತಾಲೂಕು ಮುಸ್ಲಿಂ ಯೂತ್ ಫಡೆರೇಶನ್ ಸಮಿತಿ ದೂರು ನೀಡಿದ್ದು, ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಮಾಧ್ಯಮ ವರದಿಯಲ್ಲಿ ಪ್ರಕಟವಾದ “ಬಂಗ್ಲೆಗುಡ್ಡೆ ಕಾಡಿನಲ್ಲಿ ಮುಂದುವರಿದ ಎಸ್ ಐ ಟಿ ಶೋಧ ಮತ್ತೆರಡು ತಲೆ ಬುರುಡೆ ಪತ್ತೆ” ಎಂಬ ಟೈಟಲ್ನೊಂದಿಗೆ ಬಂದ ವರದಿಗೆ ಅದರ ಫೇಸ್ಬುಕ್ ಖಾತೆಯಲ್ಲಿ “ಸನಾತನಿ ಸಿಂಹ” ಎಂಬ ಖಾತೆಯಿಂದ ಕಮೆಂಟ್ ಹಾಕಿದ ವ್ಯಕ್ತಿ ” ಒಂದು ಪೈಗಂಬರರದ್ದು ಇನ್ನೊಂದು ಆಯೇಷಾರದ್ದು” ಎಂದು ಬರೆದಿದ್ದ ಹಾಗೂ ಅದೇ ಕಮೆಂಟ್ ಬಾಕ್ಸ್ ನಲ್ಲಿ ಚೇತನ್ ಹೊದ್ದೆಟ್ಟಿ ಎಂಬ ವ್ಯಕ್ತಿ ಕೂಡ ‘ಒಂದು ಪೈಗಂಬರ್ರದ್ದು ಇನ್ನೊಂದು ಆಯೇಷಾರದ್ದು ಇರಬಹುದು’ ಎಂದು ಕಮೆಂಟ್ ಹಾಕಿ ಧಾರ್ಮಿಕ ಭಾವನೆ ಕೆರಳಿಸಿ ಕೋಮು ಗಲಭೆ ಮಾಡುವ ಷಡ್ಯಂತ್ರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸುಳ್ಯ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಉಮ್ಮರ್ ಕೆ.ಎಸ್. ಅವರ ನೇತೃತ್ವದಲ್ಲಿ ದೂರು ನೀಡಿದ್ದು, ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ, ಉನೈಸ್ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ, ರಶೀದ್ ಜಟ್ಟಿಪಳ್ಳ, ಮುನಾಫರ್ ಉಪಸ್ಥಿತರಿದ್ದರು.