ಸಂಪತ್ತು ಪರರಿಗೆ ಹಂಚುವುದರಲ್ಲಿ ಸಂತೃಪ್ತಿ ಹೆಚ್ಚು: ಫಾ. ಬೆಂಜಮಿನ್ ಪಿಂಟೋ
ಮಂಗಳೂರು: ಕೇವಲ ಸಂಪತ್ತು ಇದ್ದರೆ ಸಾಲದು.ಅದನ್ನು ಪರರಿಗೂ ಹಂಚಬೇಕು. ಆವಾಗ ಸಿಗುವ ಸಂತೃಪ್ತಿಯ ಬಗ್ಗೆ ವರ್ಣಿಸಲು ಅಸಾಧ್ಯ ಎಂದು ಉರ್ವ ಚರ್ಚ್ನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಹೇಳಿದರು.
ನಗರದ ಉರ್ವ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಮೊನ್ಸಿಂಜರ್ ಲೆಸ್ಲಿ ಎಫ್. ಶೆಣೈ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊನ್ಸಿಂಜರ್ ಲೆಸ್ಲಿ ಎಫ್. ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ 78 ವಿದ್ಯಾರ್ಥಿಗಳಿಗೆ 7.35 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಫಾ.ಲ್ಯಾನ್ಸನ್ ಪಿಂಟೋ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
ಈ ಸಂದರ್ಭ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೋಯ್ಡ್ ಲೋಬೊ, ಕಾರ್ಯದರ್ಶಿ ಸಿಲ್ವಿಯಾ ಮಸ್ಕರೇನಸ್, ಆಯೋಗಗಳ ಸಂಯೋಜಕ ಕೆವಿನ್ ಮಾರ್ಟಿಸ್ ಉಪಸ್ಥಿತರಿದ್ದರು.ಫಾ. ಮೈಕಲ್ ವಲೇರಿಯನ್ ಲೋಬೋ ಸ್ವಾಗತಿಸಿದರು. ಲೇಡಿಹಿಲ್ ಐಸಿಎಸ್ಇ ಶಾಲೆಯ ಪ್ರಿನ್ಸಿಪಾಲ್ ಭಗಿನಿ ಜೆನ್ನಿಫರ್ ಮೊರಾಸ್ ವಂದಿಸಿದರು.