ಕೆಡಿಪಿ ಸಭೆಯಲ್ಲಿ ಮಾಹಿತಿ ಹಕ್ಕು ಕಾರ್ಯಸೂಚಿಗೆ ನಿರ್ದೇಶನ: ಬದ್ರುದ್ದೀನ್ ಮಾಣಿ
ಮಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳ ವಿಲೇಗೆ ಸಂಬಂಧಿಸಿ ಪ್ರತಿ ಮೂರು ತಿಂಗಳಿ ಗೊಮ್ಮೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಭೆ ನಡೆಸಬೇಕು ಹಾಗೂ ಪ್ರತಿ ಜಿಲ್ಲಾ ಮಟ್ಟದ ಕೆಡಿಪಿ ಸಭೆ ಯಲ್ಲಿಯೂ ಆರ್ಟಿಐ ಕಾರ್ಯಸೂಚಿ ಅಳವಡಿಸಿಕೊಳ್ಳುವಂತೆ ಸರಕಾರ ಹಾಗೂ ಎಲ್ಲಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾ ಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಣಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಮಾಹಿತಿ ಹಕ್ಕು ಅಧಿನಿಯಮದ ಕುರಿತು ತರಬೇತಿ, ಜಾಗೃತಿ ಕಾರ್ಯಕ್ರಮದ ಬಳಿಕ ಮಾಧ್ಯಮದ ಜತೆ ಅವರು ಮಾತನಾಡಿದರು.
ಕಾಯ್ದೆ ಜಾರಿಗೊಂಡು 20 ವರ್ಷಗಳಾದರೂ ಕಾಯ್ದೆ ಬಗ್ಗೆ ಸಾರ್ವಜನಿರಿಗೆ ಇರುವಷ್ಟು ಮಾಹಿತಿ ಕೆಲ ಮಾಹಿತಿ ಅಧಿಕಾರಿಗಳಿಗೆ ಇಲ್ಲ. ಜಿಲ್ಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ ಮಾಡಬೇಕೆಂದು ನಿರ್ದೇಶನವಾಗಿ 20 ವರ್ಷಗಳಾದರೂ ಕೆಲ ಜಿಲ್ಲೆಗಳಲ್ಲಿ ಈ ಕಾರ್ಯ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ಕಾಯ್ದೆಯಡಿ ಅರ್ಜಿ ಹಾಕಲು ತಿಳಿಯದಿದ್ದರೆ ಮಾಹಿತಿ ಅಧಿಕಾರಿಯೇ ಅರ್ಜಿ ಸಲ್ಲಿಕೆಗೆ ಸಹಾಯ ಮಾಡಬೇಕು ಎಂದವರು ಹೇಳಿದರು.
ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ ಕಳೆದ ಫೆ.4ರಂದು 55400 ಮೇಲ್ಮನವಿಗಳು ವಿಲೇವಾರಿಗೆ ಬಾಕಿಯಿತ್ತು. ಅ.17ಕ್ಕೆ ಈ ಸಂಖ್ಯೆ 38787ಕ್ಕೆ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 232 ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ರಾಜ್ಯದಲ್ಲಿ ದ.ಕ. 29ನೇ ಸ್ಥಾನದಲ್ಲಿದೆ.
ಕೋವಿಡ್ ಸಂದರ್ಭ ಅರ್ಜಿಗಳ ವಿಚಾರಣೆ ಆಗಿರಲಿಲ್ಲ. ಜತೆಗೆ ಪೂರ್ಣ ಪ್ರಮಾಣದಲ್ಲಿ ಆಯುಕ್ತರ ನೇಮಕ ಆಗಿರ ಲಿಲ್ಲ. ಇದರಿಂದಾಗಿ ಮೇಲ್ಮನವಿಗಳು 2015ರಿಂದಲೂ ಬಾಕಿ ಉಳಿದಿವೆ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ ಒಟ್ಟು 6 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇದರ ಶೇ.5ರಷ್ಟು ಅಂದರೆ 30000 ಮೇಲ್ಮನವಿಗಳು ಸಲ್ಲಿಕೆಯಾಗುತ್ತವೆ. ಕೆಳಹಂತದಲ್ಲಿ 60 ಶೇ. ಅರ್ಜಿಗಳಿಗೆ ಮಾಹಿತಿ ನೀಡಿರಬಹುದು. ಕಳೆದ 8 ತಿಂಗಳಿನಲ್ಲಿ 15 ಸಾವಿರ ಮೇಲ್ಮನವಿ ಗಳು ಬಂದಿವೆ. ಮೇಲ್ಮನವಿ ಅರ್ಜಿಗಳನ್ನು ಪ್ರಾಮಾಣಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದರು.
ಕಳೆದ 8 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಬಳಿಕ ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅಧಿಕಾರಿ ಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅರ್ಜಿದಾರ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು, ಅದಕ್ಕೆ ಮಿತಿಯಿಲ್ಲ. ನಾಗರಿಕರು ಸಲ್ಲಿಸುವ ಅರ್ಜಿ ಸುದುದ್ದೇಶ, ಪ್ರಾಮಾಣಿಕತೆ, ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದ್ದರೆ ಕಾಯ್ದೆಗೆ ಬಲ ಬರುತ್ತದೆ. ಅರ್ಜಿದಾರರು ಗುಣಮಟ್ಟದ ಅರ್ಜಿ ಸಲ್ಲಿಸಿ ಕಾಯ್ದೆಯನ್ನು ಪರಿಣಾಮ ಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಮಾಹಿತಿ ಅಧಿಕಾರಿಗಳು ಸಾರ್ವಜನಿಕರ ಮಾಹಿತಿ ಹಕ್ಕು ಅರ್ಜಿಯನ್ನು ಉಪೇಕ್ಷೆ, ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ನೀಡದೇ ಸತಾಯಿಸುವುದು, ನಿಯಮ ಉಲ್ಲಂಘಿಸಿದರೆ 25 ಸಾವಿರ ರೂ. ದಂಡ, ಇಲಾಖಾ ವಿಚಾರಣೆ, ಶಿಸ್ತು ಕ್ರಮ, ಅರ್ಜಿದಾರರಿಗೆ ಪರಿಹಾರ ನೀಡಲೂ ಅವಕಾಶವಿದೆ. ಶಿಕ್ಷೆ ನೀಡುವುದು ನಮ್ಮ ಉದ್ದೇಶವಲ್ಲ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಅದಕ್ಕಾಗಿ ಸಾರ್ವಜನಿಕರು ನಿಯಮಾನುಸಾರ, ಗುಣಮಟ್ಟದ ಅರ್ಜಿ ಸಲ್ಲಿಕೆ ಮಾಡಬೇಕು. ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ 26 ಮಂದಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಆಯುಕ್ತ ಬದ್ರುದ್ದೀನ್ ಕೆ. ಮಾಣಿ ಹೇಳಿದರು.