ವೆನ್ಲಾಕ್ನಲ್ಲಿ ಐಸಿಯು ಘಟಕಗಳ ಕಡಿತದಿಂದ ರೋಗಿಗಳ ಪರದಾಟ: ಶಾಸಕ ಕಾಮತ್ ಆರೋಪ
ಮಂಗಳೂರು: ರಾಜ್ಯ ಸರಕಾರವು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಇದರಿಂದ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿರುವ ಶಾಸಕ ವೇದವ್ಯಾಸ ಕಾಮತ್, ಆರೋಗ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ.
ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭ ವೆನ್ಲಾಕ್ನಲ್ಲಿ ಕೇವಲ 16 ತೀವ್ರ ನಿಗಾ ಘಟಕಗಳಿದ್ದವು. ಆನಂತರ ರೋಗಿಗಳಿಗೆ ಅನುಕೂಲವಾಗಲು ಹಂತ ಹಂತವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಅಂತಿಮವಾಗಿ ಜನರು ಕೊರೋನ ಸಂಕಷ್ಟದಲ್ಲಿ ಸಿಲುಕಿದ್ದಾಗ ಬಿಜೆಪಿ ಸರಕಾರದ ವಿಶೇಷ ಸಹಕಾರದೊಂದಿಗೆ 115ಕ್ಕೂ ಅಧಿಕ ತೀವ್ರ ನಿಗಾ ಘಟಕ ಹಾಗೂ 250ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರಕಾರವು ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ರೋಗಿಗಳು ಈ ಹಿಂದಿನಂತೆ ಪರದಾಡುವಂತೆ ಮಾಡುತ್ತಿದೆ ಎಂದು ಶಾಸಕ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು.
ವೆನ್ಲಾಕ್ ಆಸ್ಪತ್ರೆಗೆ ದ.ಕ. ಮಾತ್ರವಲ್ಲದೆ ಸುತ್ತಮುತ್ತಲಿನ ನಾನಾ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರು ತ್ತಾರೆ. ಅಲ್ಲದೆ ಮಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜನರ ಅಗತ್ಯಕ್ಕನುಗುಣವಾಗಿ ತೀವ್ರನಿಗಾ ಘಟಕಗಳನ್ನು ಹೆಚ್ಚಿಸಬೇಕೇ ಹೊರತು ಕಡಿತಗೊಳಿಸಬಾರದು. ಸ್ಟಾಫ್ ನರ್ಸ್ಗಳ ಕೊರತೆಯಿದ್ದರೆ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುವುದು ಬೇಡ. ಜಿಲ್ಲೆಯ ಉಸ್ತುವಾರಿ ಸಚಿವರೇ ರಾಜ್ಯದ ಆರೋಗ್ಯ ಸಚಿವರಾಗಿದ್ದರೂ ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದ್ದಾರೆ.