ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಪೋಸ್ಟ್ ಕಾರ್ಡ್ ಚಳವಳಿ
ಬಂಟ್ವಾಳ : ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಯಾಗಬೇಕೆಂದು ಆಗ್ರಹಿಸಿ ವಕೀಲರ ಸಂಘ ಬಂಟ್ವಾಳ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ಗುರುವಾರ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ನಡೆಯಿತು.
ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಜಯರಾಮ್ ರೈ ಅವರು ಪೋಸ್ಟ್ ಕಾರ್ಡ್ ಚಳಿವಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಎಂ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಂಗಳೂರು, ಜಿಲ್ಲೆಗಳಿಗೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ರಚನೆಯಾಗಬೇಕು ಎಂಬುದು ಎರಡು ದಶಕಗಳ ಹಿಂದೆ ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಪಿ. ಚಂಗಪ್ಪ ಅವರ ನೇತೃತ್ವದಲ್ಲಿ ಹೋರಾಟ ಪ್ರಾರಂಭವಾಗಿದ್ದು, ಪ್ರಸ್ತುತ ಒಂದುವರೆ ವರ್ಷಗಳಿಂದ ಮಂಗಳೂರಿನ ಈಗಿನ ಅಧ್ಯಕ್ಷರಾದ ಎಚ್.ವಿ. ರಾಘವೇಂದ್ರ ರವರ ನೇತೃತ್ವದಲ್ಲಿ ಮತ್ತೆ ವೇಗ ಸಿಕ್ಕಿದ್ದು, ಅದರ ಮುಂದುವರಿದ ಹೋರಾಟದ ಅಂಗವಾಗಿ ಪೋಸ್ಟ್ ಕಾರ್ಡ್ ಅಭಿಯಾನ ಇಂದು ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸಹಯೋಗದಲ್ಲಿ ಏಕ ಕಾಲದಲ್ಲಿ ನಡೆಯುತ್ತಿದೆ ಎಂದು ಅವರು ಹೈಕೋರ್ಟ್ ಪೀಠ ರಚನೆಗೆ ಮಂಗಳೂರಿನಲ್ಲಿ ಜಾಗ ಗುರುತಿಸಿದ್ದು, ಸರಕಾರ ಮತ್ತು ರಾಜ್ಯಪಾಲರಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಅಭಿಯಾನ ಮತ್ತು ಹೋರಾಟಗಳು ಪ್ರಾರಂಭವಾಗಿದೆ ಈ ಹೋರಾಟಕ್ಕೆ ಎಲ್ಲಾ ಸಂಘ ಸಂಸ್ಥೆ ಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಕಿರಿಯ ವಕೀಲರು, ಸಾರ್ವಜನಿಕರು, ಪೋಸ್ಟ್ ಕಾರ್ಡ್ ಅಭಿಯಾನದಲ್ಲಿ ಭಾಗವಹಿಸಿದರು.