×
Ad

ಮುಗಿಯದ ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ: ಕಾಂಗ್ರೆಸ್‌ನಿಂದ ‘ರೈಲ್ವೇ ಕೆಳಸೇತುವೆ ಚಲೋ’

Update: 2025-10-25 17:01 IST

ಮಂಗಳೂರು: ಮಹಾಕಾಳಿಪಡ್ಪು ರೈಲ್ವೆ ಕೆಳ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಬ್ದುಲ್ ಸಲೀಂ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಶನಿವಾರ ರೈಲ್ವೇ ಕೆಳಸೇತುವೆ ಚಲೋ ಪ್ರತಿಭಟನೆ ನಡೆಸಲಾಯಿತು.

ಸೇತುವೆ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿ ಸಲು ಸ್ಮಾರ್ಟ್ ಸಿಟಿಯ ಮ್ಯಾನೇಜರ್ ಅರುಣ್ ಪ್ರಭಾರನ್ನು ಒತ್ತಾಯಿಸಿದರು.

ಈ ಸಂದರ್ಭ ಮುಂದಿನ 30 ದಿನಗಳ ಒಳಗಡೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಿವುದಾಗಿ ಅರುಣ್ ಪ್ರಭಾರವರು ಪ್ರತಿಭಟನಾಕಾರರಿಗೆ ನಿಯೋಗಕ್ಕೆ ಭರವಸೆ ನೀಡಿದರು.

ಕಾಮಗಾರಿ ಅಮೆಗತಿಯಲ್ಲಿ ನಡೆಯುತ್ತಿದ್ದು, ಮಳೆಯ ಕಾರಣದಿಂದ ಕಾಮಗಾರಿ ಕುಂಠಿತಗೊಂಡಿದೆ ಎಂದು ಹೇಳುವ ಉತ್ತರ ಸಮಂಜಸವಲ್ಲ ಕೂಡಲೇ ಕಾಮಗಾರಿ ಮುಗಿಸಬೇಕು ಇಲ್ಲದೇ ಇದ್ದಲ್ಲಿ ಪಂಪ್‌ವೆಲ್ ಮತ್ತು ಕಂಕನಾಡಿಯಲ್ಲಿ ಉದ್ದೇಶಿಸಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಮಹಾಕಾಳಿಪಡ್ಪು ರೈಲ್ವೆ ಅಂಡರ್ ಬ್ರಿಡ್ಜ್‌ನ ಸಮಸ್ಯೆ ಪರಿಹಾರವಾಗದೇ ಪಂಪವೆಲ್ ಮತ್ತು ಕಂಕನಾಡಿ ಕಾಮಗಾರಿಗಳನ್ನು ಮುಂದುರಿಸಬಾರದೆಂದು ಐವನ್ ಡಿಸೋಜಾ ಇವರು ಪೋಲಿಸ್ ಕಮಿಷನರ್ ಮತ್ತು ಮಂಗಳೂರು ಸಂಚಾರ ವಿಭಾಗದ ಡಿಸಿಪಿಯವರನ್ನು ಒತ್ತಾಯಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆಯುತ್ತಿದೆ. ಮಳೆಗಾಲದಲ್ಲಿ ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಹಾಗೂ ಚರಂಡಿಗಳಲ್ಲಿ ನೀರು ನಿಂತು ಡೆಂಗ್ಯೂ ಮಲೇರಿಯಾದಂತಹ ಕಾಯಿಲೆಯಿಂದ ಬಳಲುವಂತಾಗಿದೆ ಎಂದು ಐವನ್ ಡಿಸೋಜಾ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಸಲೀಂ ಇಲ್ಲಿನ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದು ನೀರು ಸಂಗ್ರಹಕ್ಕೆ ಮಾಡಲಾದ ಟ್ಯಾಂಕ್‌ನಂತಿದ್ದು, ಸಾರ್ವಜನಿಕರಿಗೆ ಉಪಯೋಗವಾಗದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಆಲ್ಸ್ಟನ್ ಡಿಕುನ್ಹಾ, ಸತೀಶ್ ಪೆಂಗಲ್, ಚಂದ್ರಕಲಾ ಜೋಗಿ, ಸುಧಾಕರ್, ಶಾಲಿನಿ, ನವಾಜ್ ಜೆಪ್ಪು, ಮನೀಶ್ ಬೋಳಾರ್, ನೆಲ್ಸನ್, ಹೈದರ್ ಬೋಳಾರ್, ವಿಕಾಸ್ ಶಟ್ಟಿ, ನೀತು ಡಿಸೋಜಾ, ಹಬೀಬುಲ್ಲಾ ಕಣ್ಣೂರು, ಸ್ಥಳೀಯರಾದ ಬಾಬು ಸುವರ್ಣ, ಲತೀಫ್ ಪಾಟ್ನಾ, ಜೆ. ಇಬ್ರಾಹಿಂ, ಸಪ್ನ ಜೆಪ್ಪುಪಾಟ್ನಾ, ಅಬ್ದುಲ್ ವಹಾಬ್, ಅಜ್ಮಲ್, ಹಬಿಬುಲ್ಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News