ಬಜೆಟ್| ಮೀನುಗಾರಿಕಾ ಕ್ಷೇತ್ರಕ್ಕೆ ಗರಿಷ್ಠ ಅನುದಾನ ಮೀಸಲಿಡಲಾಗಿದೆ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಫೆ.2: ಕೇಂದ್ರ ಸರಕಾರದ 2026-27ರ ಬಜೆಟ್ನಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ಇದುವರೆಗಿನ ಅತ್ಯಧಿಕ ವಾರ್ಷಿಕ ಅನುದಾನವಾಗಿ 2,761.80 ಕೋಟಿ ಮೀಸಲಿಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಯನ್ನು ಬಲಪಡಿಸುವುದು, ರಫ್ತು ಹೆಚ್ಚಿಸುವುದು ಮತ್ತು ಮೀನುಗಾರರು ಹಾಗೂ ಮೀನು ಸಾಕಾಣಿಕೆದಾರರ ಜೀವನೋಪಾಯವನ್ನು ಸುಧಾರಿಸುವುದರ ಮೇಲೆ ಕೇಂದ್ರ ಸರಕಾರದ ಒತ್ತಾಸೆ ಸ್ಪಷ್ಟವಾಗಿದೆ. ಒಟ್ಟು ಅನುದಾನದಲ್ಲಿ 2,530 ಕೋಟಿ ರೂಪಾಯಿ ಯೋಜನಾ ಆಧಾರಿತ ಕ್ರಮಗಳಿಗೆ ಮೀಸಲಾ ಗಿದ್ದು, ಪ್ರಧಾನ ಮಂತ್ರಿ ಮತ್ಸಸಂಪದಾ ಯೋಜನೆಯಿಂದ 2026-27ಕ್ಕೆ 2500 ಕೋಟಿ ರೂ ಅನುದಾನವನ್ನು ಪಡೆದಿದೆ ಎಂದು ಮಾಹಿತಿ ನೀಡಿದರು.
ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ 500 ಜಲಾಶಯ ಗಳು ಮತ್ತು ಅಮೃತ್ ಸರೋವರಗಳ ಏಕೀಕೃತ ಅಭಿವೃದ್ಧಿಗೆ ಹಾಕಿರುವ ಯೋಜನೆಯಡಿಯಲ್ಲಿ ಸ್ಪಾರ್ಟ್ ಅಪ್ಗಳು, ಮಹಿಳಾ ನೇತೃತ್ವದ ಗುಂಪುಗಳು ಹಾಗೂ ಮೀನುಗಾರರ ಉತ್ಪಾದಕ ಸಂಸ್ಥೆಗಳು ಭಾಗವಹಿಸುವ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ನುಡಿದರು.
ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಮುಖ ನಗರಗಳ ಅಭಿವೃದ್ಧಿಗಾಗಿ ನಗರ ಆರ್ಥಿಕ ವಲಯ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಲ್ಲಿ ಐದು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂಪಾಯಿಗಳನ್ನು ಬೆಂಗಳೂರಿಗೆ ನೀಡಲಾಗುತ್ತದೆ.
ರೇಷ್ಮೆಗೆ ರಾಷ್ಟ್ರೀಯ ಫೈಬರ್ ಸ್ಕೀಮ್, ಫಲ ಬಿಡದ ಹಳೆಯ ತೆಂಗು ತೆಗೆದು ಹೊಸ ಸಸಿ ನೆಡಲು ನೆರವು. ಗೋಡಂಬಿಗೆ ಜಾಗತಿಕ ಬ್ರ್ಯಾಂಡ್ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ.
ಬೆಂಗಳೂರಿಗೆ 2 ಹೈಸ್ಪೀಡ್ ರೈಲು ಕಾರಿಡಾರ್, ಬೆಂಗಳೂರಿನಿಂದ ಹೈದ್ರಾಬಾದಿಗೆ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಇದರಿಂದ ವ್ಯಾಪಾರ, ವ್ಯವಹಾರ ಅಭಿವೃದ್ಧಿ ಕಾಣಲಿವೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 2026-27ನೇ ಸಾಲಿನಲ್ಲಿ ವಿಶೇಷ 500 ಕೋಟಿ ರೂಪಾಯಿ ಗಳನ್ನು ಕೂಡ ಮೀಸಲಿಡಲಾಗಿದೆ. ಕಳೆದ ಬಾರಿ 350 ಕೋಟಿ ರೂಪಾಯಿ ನೀಡಲಾಗಿತ್ತು. ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ರೈಲು ಮಾರ್ಗ ನಿರ್ಮಾಣ, ಜೋಡಿ ಹಳಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಲಾಗಿದೆ.
17 ಕ್ಯಾನ್ಸರ್ ಔಷಧಿ ಹಾಗೂ ಮಧುಮೇಹ ಔಷಧಿಗಳು ಅಗ್ಗದ ದರದಲ್ಲಿ ಸಿಗುವಂತೆ ವ್ಯವಸ್ಥೆ. ಇಂತಹ ಔಷಧಿಗಳ ಮೇಲಿನ ಕನಿಷ್ಠ ಸೀಮಾ ಸುಂಕವನ್ನು ರದ್ದುಗೊಳಿಸಲಾಗಿದೆ.
ಈ ಬಾರಿ ಬಜೆಟಿನಲ್ಲಿ ಸ್ತ್ರೀಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ , ಭಾರತದಲ್ಲಿ ಡೇಟಾ ಸೆಂಟರ್ ತೆರೆಯುವ ವಿದೇಶಿ ಕಂಪನಿಗಳಿಗೆ 2047 ರವರೆಗೂ ತೆರಿಗೆ ರಜೆ ನೀಡುವುದಾಗಿ ಕೇಂದ್ರ ಸರಕಾರ ಮಹತ್ವದ ಘೋಷಣೆಯನ್ನು ಮಾಡಿದೆ.
ಪಶು ಆಹಾರ ಮತ್ತು ಹತ್ತಿ ಬೀಜ ಪೂರೈಕೆಯಲ್ಲಿ ತೊಡಗಿರುವ ಸಹಕಾರಿ ವಲಯದ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದೆ ಎಂದು ಮಾಹಿತಿ ನೀಡಿದರು.
ಆರ್ಥಿಕತೆಯಲ್ಲಿ ಜಗತ್ತಿನಲ್ಲೇ ಭಾರತವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ಯುವುದು ಕೇಂದ್ರ ಸರಕಾರದ ಗುರಿಯಾ ಗಿದೆ. ಉದ್ಯೋಗ ಮತ್ತು ಕೃಷಿ ಕ್ಷೇತ್ರದ ಮೇಲೆ ಹೆಚ್ಚು ಆದ್ಯತೆ, ಬಯೋಫಾರ್ಮ್ ಹಬ್ಗೆ 10 ಲಕ್ಷ ಕೋಟಿ ರೂ, 3 ಹೊಸ ಫಾರ್ಮಾ ಕಾಲೇಜು, ಮೆಡಿಕಲ್ ಟೂರಿಸಮ್ಗೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
*ಬೆಂಗಳೂರಿಗೆ ನಾನು ನಾಲ್ಕು ಗಂಟೆಯಲ್ಲಿ ತಲುಪುತ್ತೇನೆ:ದೇಶದ ಪ್ರತಿಯೊಂದು ಮನೆಯವರು ನರೇಂದ್ರ ಮೋದಿ ಸರಕಾರದ ಒಂದಲ್ಲ ಒಂದು ಯೋಜನೆ ಪ್ರಯೋಜನ ಪಡೆದಿದ್ದಾರೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಡಿ ಕಾಂಕ್ರಿಟೀಕರಣ ಸುಂದರವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗಲು ಆನಂದವಾಗುತ್ತದೆ. ನಾನು ನಾಲ್ಕು ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ತಲುಪುತ್ತೇನೆ ಎಂದರು.
*ರೈಲ್ವೇ ಎಲ್ಲ ಯೋಜನೆಗಳು 50-50: ಕೇಂದ್ರ ಸರಕಾರದ ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕಿಲ್ಲ. ಎಲ್ಲ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. ರಾಜ್ಯದಲ್ಲಿ ಅನುಷ್ಠಾನಗೊಳ್ಳುವ ರೈಲ್ವೇ ಯೋಜನೆಗಳಿಗೆ ಕೇಂದ್ರ ಸರಕಾರ ಶೇ 50ರಷ್ಟು ಅನುದಾನ ನೀಡಿದರೆ ಉಳಿದ ಶೇ50ರಷ್ಟು ಅನುದಾನವನ್ನು ರಾಜ್ಯ ಸರಕಾರ ಭರಿಸಬೇಕು. ಇದು ಹಿಂದೆ ಮಲ್ಲಿಕಾರ್ಜುನ ಖರ್ಗೆ ರೈಲ್ವೇ ಸಚಿವರಾಗಿದ್ದಾಗ ಆಗಿರುವ ಒಪ್ಪಂದ ಎಂದು ಹೇಳಿದರು.
*ರಾಜ್ಯ ಸರಕಾರ ಶ್ವೇತಪತ್ರ ಹೊರಡಿಸಲಿ: ಜಿಎಸ್ಟಿ ನಿಯಮಗಳು ಎಲ್ಲ ರಾಜ್ಯಗಳಿಗೂ ಒಂದೇ ರೀತಿಯಾಗಿದೆ. ಜಿಎಸ್ಟಿ ಪಾಲು ಕೇಂದ್ರ ಸರಕಾರ ರಾಜ್ಯಕ್ಕೆ ಸರಿಯಾಗಿ ನೀಡುತ್ತಿಲ್ಲ ಎಂದು ಹೇಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್ಟಿ ಸದಸ್ಯರಾಗಿದ್ದರೂ, ಜಿಎಸ್ಟಿ ಸಭೆಗಳಿಗೆ ಯಾಕೆ ಹೋಗುತ್ತಿಲ್ಲ. ಅಲ್ಲಿ ಹೋಗಿ ಯಾಕೆ ಮಾತನಾಡುತ್ತಿಲ್ಲ. ಎಂದು ಪ್ರಶ್ನಿಸಿದರು.
ಕರ್ನಾಟಕ ಸರಕಾರ ಶ್ವೇತ ಪತ್ರ ಹೊರಡಿಸಲಿ. ಆಗ ಕೇಂದ್ರ ಸರಕಾರ ಎಷ್ಟು ಹಣ ಕೊಡುತ್ತದೆ. ರಾಜ್ಯ ಸರಕಾರ ಎಷ್ಟು ಹಣ ನೀಡುತ್ತದೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
* ಬಿಲ್ ಪಾವತಿ ಬಾಕಿಯಾಗಲು ಕೇಂದ್ರ ಸರಕಾರ ಕಾರಣವಲ್ಲ: ಗುತ್ತಿಗೆದಾರರಿಗೆ ಬಿಲ್ ಪಾವತಿ ಬಾಕಿಯಾಗಲು ಕೇಂದ್ರ ಸರಕಾರ ಕಾರಣವಲ್ಲ ರಾಜ್ಯ ಸರಕಾರದ ವೈಫಲ್ಯ ಕಾರಣವಾಗಿದೆ. 16 ವರ್ಷ ಬಜೆಟ್ ಮಂಡಿಸಿರುವ ಅಪಾರ ಅನುಭವ ಇರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯನ್ನು ಹೊರಡಿಸುವಾಗ ಈ ರಾಜ್ಯದ ವೆಚ್ಚದ ಬಗ್ಗೆ ಯೋಚಿಸಬೇಕಿತ್ತು. ಆದರೆ ಆ ಬಗ್ಗೆ ಯೋಚಿಸದೆ ಮಾಡಿರುವ ಎಡವಟ್ಟಿನ ಕಾರಣ ಈಗ ರಾಜ್ಯ ಸರಕಾರ ಸಂಕಷ್ಟದಲ್ಲಿ ಸಿಲುಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ , ಪಾಲಿಕೆಯ ಚುನಾವಣೆ ರಾಜ್ಯ ಸರಕಾರ ಮಾಡದಿರಲು ಮುಖ್ಯ ಮಂತ್ರಿ ಕುರ್ಚಿಯ ಗೊಂದಲ ಕಾರಣವಾಗಿದೆ ಎಂದರು.
ವಿಜಯೇಂದ್ರ ಎಲ್ಲರಿಗೂ ಅಧ್ಯಕ್ಷರು: ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ್ದು ಬಿಜೆಪಿಯ ರಾಷ್ಟ್ರೀಯ ನಾಯಕರು. ಅವರು ಬಿಜೆಪಿಯ ರಾಜ್ಯದ ಎಲ್ಲರಿಗೂ ಅಧ್ಯಕ್ಷರು. ರಾಜ್ಯದಲ್ಲಿ ಅತ್ಯಂತ ಕ್ರೀಯಾಶೀಲವಾಗಿ ಪಕ್ಷವನ್ನು ಅವರು ಮುನ್ನೆಡೆಸುತ್ತಿದ್ದಾರೆ,ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಅದೇನು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷನಾಗಿ ನೇಮಕ ಗೊಂಡು ಒಂದು ವಾರ ಕಳೆಯುವಷ್ಟರಲ್ಲಿ ನಳಿನ್ ಕುಮಾರ್ ಅವರನ್ನು ಬಿಜೆಪಿ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರಲು ಆರಂಭಿಸಿತ್ತು. ಆದರೆ ನನಗೆ 4 ವರ್ಷ ಮತ್ತು 8 ತಿಂಗಳು ಬಿಜೆಪಿ ರಾಜ್ಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಳಿನ್ ಕುಮಾರ್ ಕಟೀಲ್ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ , ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ದ.ಕ. ಬಿಜೆಪಿ ಮಾಧ್ಯಮ ಸಂಚಾಲಕ ವಸಂತ್ ಜೆ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.