ಉಳ್ಳಾಲ ಉರೂಸ್ ಪ್ರಯುಕ್ತ ಎಲೈಟ್ ಮೀಟ್-2025 ಕಾರ್ಯಕ್ರಮ
ಉಳ್ಳಾಲ, ಮೇ 12: ಉಳ್ಳಾಲ ಉರೂಸ್ ಪ್ರಯುಕ್ತ ಸಯ್ಯಿದ್ ಮದನಿ ದರ್ಗಾ ವತಿಯಿಂದ ಎಲೈಟ್ ಮೀಟ್ -2025 ವಿಶೇಷ ಕಾರ್ಯಕ್ರಮವು ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆಯಿತು.
ಟ್ರಸ್ಟ್ನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳನ್ನೂ, ಸಮಾಜದಲ್ಲಿ ಗೌರವಪೂರ್ಣ ಸ್ಥಾನಕ್ಕೇರಿದ ಸಾಧಕರನ್ನೂ ಗೌರವಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಯ್ಯಿದ್ ಮದನಿ ಚಾರಿಟೆಬಲ್ ಟ್ರಸ್ಟ್ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಟಾಪರ್ಗಳಲ್ಲದೆ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರರು, ಸೈಯದ್ ಮದನಿ ಚಾರಿಟೇ ಬಲ್ ಟ್ರಸ್ಟ್ ಅಧೀನ ವಿದ್ಯಾಸಂಸ್ಥೆಗಳಲ್ಲಿ ಕಲಿತ ವೈದ್ಯಕೀಯ ಕ್ಷೇತ್ರದ ಎಂಬಿಬಿಎಸ್ ಪದವೀಧರರು, ಚಾರ್ಟರ್ಡ್ ಅಕೌಂಟೆಂಟ್ಗಳು ಹಾಗೂ ವಕೀಲರನ್ನು ಸನ್ಮಾನಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಕಣಚೂರು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಯು.ಟಿ. ಇಕ್ಬಾಲ್, ಮೊಂಟೆಪದವು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಮದನಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕಮಲಾಕ್ಷ, ಮದನಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್, ಟಿಪ್ಪುಸುಲ್ತಾನ್ ಪದವಿ ಕಾಲೇಜಿನ ಪೂರ್ವ ಪ್ರಾಧ್ಯಾಪಕ ಮುಹಮ್ಮದ್ ಮುನೀರ್ ಅವರನ್ನು ಗೌರವಿಸಲಾಯಿತು.
ಉಳ್ಳಾಲ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಖಾಲಿದ್, ಟಿಪ್ಪುಸುಲ್ತಾನ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ರಶೀದ್ ಅವರನ್ನು ಕ್ರೀಡೆಯಲ್ಲಿ ಅದ್ಭುತ ಸಾಧನೆಗಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ಅಧೀನ ವಿದ್ಯಾಸಂಸ್ಥೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಹಾಗೂ 15 ವರ್ಷಗಳಿಂದ ಹೆಚ್ಚು ಅವಿರತ ಸೇವೆ ಸಲ್ಲಿಸುತ್ತಿರುವ ಹಿರಿಯ ಶಿಕ್ಷಕರಿಗೆ ದೀರ್ಘಕಾಲಿಕ ಸೇವಾ ಪುರಸ್ಕಾರ ನೀಡಲಾಯಿತು. ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಮುಖ್ಯ ಶಿಕ್ಷಕರನ್ನು ಲೀಡರ್ಶಿಪ್ ಎಕ್ಸಲೆನ್ಸಿ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ದರ್ಗಾದ ಅಧ್ಯಕ್ಷ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ರೈಟ್ ಅಧಿಕೃತವಾಗಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಸಿಪ್ರಿಯನ್ ಮೊಂತೆರೋ, ಡಿಡಿಪಿಐ ಗೋವಿಂದ ಮಡಿವಾಳ, ಅಕ್ಷರ ದಾಸೋಹದ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯ ನಾಯಕ್, ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜ್, ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಉಳ್ಳಾಲ ತಾಲೂಕು ಆಹಾರ ಪರೀಕ್ಷಾಧಿಕಾರಿ ರಫೀಕ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಉಳ್ಳಾಲ ನಗರ ಸಭೆಯ ಅಧ್ಯಕ್ಷೆ ಶಶಿಕಲಾ, ಉದ್ಯಮಿ ಹಾಜಿ ಅಬ್ದುಲ್ ರವೂಫ್, ಸಯ್ಯದ್ ಮದನಿ ದರ್ಗಾದ ಕೋಶಾಧಿಕಾರಿ ನಾಝಿಮ್, ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಫಾಝಿಲ್ ಮತ್ತು ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹುಸೇನ್, ಜೊತೆ ಕಾರ್ಯದರ್ಶಿ ಅಝೀಝ್ ಕೋಡಿ, ಉಳ್ಳಾಲ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಸೈಯದ್ ಮದನಿ ದರ್ಗಾ ಮತ್ತು ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಾರಿಟೇಬಲ್ ಟ್ರಸ್ಟ್ನ ಸಂಯೋಜಕ ಎಂಎಚ್ ಮಲಾರ್ ಸ್ವಾಗತಿಸಿದರು. ಕೋಟೆಪುರ ಟಿಪ್ಪುಸುಲ್ತಾನ್ ವಿದ್ಯಾಸಂಸ್ಥೆಯ ಶಿಕ್ಷಕ ಮುಹಮ್ಮದ್ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಹಳೆಕೋಟೆ ಸೈಯದ್ ಮದನಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ವಂದಿಸಿದರು.