21ರಂದು ನಂದಿನಿ ಉಡುಪಿ ಡೈರಿ ಕಚೇರಿಗೆ ಶಂಕುಸ್ಥಾಪನೆ, 24ರಂದು ಮಂಗಳೂರು ಡೈರಿ ಉಗ್ರಾಣಕ್ಕೆ ಶಂಕುಸ್ಥಾಪನೆ
ಮಂಗಳೂರು, ಜ. 18: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ನಂದಿನಿ) ಇದರ ಉಡುಪಿ ಡೈರಿ ಆಡಳಿತ ಕಚೇರಿ ಶಂಕುಸ್ಥಾಪನೆ ಹಾಗೂ ನೂತನ ಉಪಹಾರ ಗೃಹದ ಉದ್ಘಾಟನೆ ಜ.21ರಂದು ನಡೆಯಲಿದೆ. ಜ.24ರಂದು ಮಂಗಳೂರು ಡೈರಿ ಉಗ್ರಾಹಣದ ಶಂಕುಸ್ಥಾಪನೆ ಹಾಗೂ ಸಿಬ್ಬಂದಿಯ ವಸತಿ ಸಮುಚ್ಚಯ ಉದ್ಘಾಟನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ., ಉಡುಪಿ ಡೈರಿಯ ಆಳಿತ ಕಚೇರಿ 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಉಪಾಹಾರ ಗೃಹ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದರು.
ಮಂಗಳೂರು ಡೈರಿ ಉಗ್ರಾಣವು 7.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದರೆ, ಸಿಬ್ಬಂದಿಗಾಗಿ 6 ಕೋಟಿ ರೂ. ವೆಚ್ಚದಲ್ಲಿ 15 ಫ್ಲ್ಯಾಟ್ ಗಳ ವಸತಿ ಸಮುಚ್ಚಯವನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.
21ರಂದು ಪೂರ್ವಾಹ್ನ 11:30ಕ್ಕೆ ಉಡುಪಿ ಡೈರಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸುವರು. ಆಡಳಿತ ಕಚೇರಿಗೆ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಎಲ್.ಪಿ.ಭೀಮಾ ನಾಯ್ಕಾ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ನೂತನ ಉಪಾಹಾರ ಗೃಹವನ್ನು ಸಂಸದ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು ಎಂದು ಅವರು ಮಾಹಿತಿ ನೀಡಿದರು.
24ರಂದು 11:30ಕ್ಕೆ ಮಂಗಳೂರು ಡೈರಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು, ವಸತಿ ಸಮುಚ್ಚಯ ಉದ್ಘಾಟನೆ ಹಾಗೂ ಉಗ್ರಾಣದ ಶಂಕು ಸ್ಥಾಪನೆಯನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.
ನಂದಿನಿ ಹಾಲಿನ ವಿತರಣೆ ಮಾರ್ಗದ ವಾಹನಗಳಿಗೆ ಶೇ. 100ರಷ್ಟು ಜಿಪಿಎಸ್ ಅಳವಡಿಸಲಾಗಿದೆ. ಇದರಿಂದ ಡೀಲರ್ಗಳಿಗೆ ಒಕ್ಕೂಟದ ವಾಹನಗಳ ಸಂಚಾರ ಮಾಹಿತಿ ನಿರಂತರ ಲಭ್ಯವಾಗುವಂತೆ ಮಾಡಲಾಗಿದೆ. ನಗದು ರಹಿತ ಪದ್ಧತಿ ಪ್ರೋತ್ಸಾಹಿಸಲು ಒಕ್ಕೂಟವು ನಂದಿನಿ ಅಧಿಕೃತ ಡೀಲರುಗಳಿಗೆ ಡೈಲಿ ಆರ್ಡರ್ ಯಾಪ್ ಅಳವಡಿಸಿದೆ. 2023ರ ಫೆಬ್ರವರಿ 26ರಿಂದ ನಗದು ರಹಿತ ವ್ಯವಸ್ಥೆಯನ್ನು ಆರಂಭಿಸುವ ಮೂಲಕ ಸಹಕಾರಿ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿಯೇ ಪ್ರಥಮವಾಗಿ ನಗದು ರಹಿತ ವ್ಯವಹಾರವನ್ನು ಆರಂಭಿಸಿದ ಪ್ರಥಮ ಒಕ್ಕೂಟವಾಗಿ ನಂದಿನಿ ಮೂಡಿ ಬಂದಿದೆ. ಒಕ್ಕೂಟವು 2022-23ನೇ ಸಾಲಿನಲ್ಲಿ ಸರಾಸರಿ 1,04,448 ಲಕ್ಷ ರೂ. ವ್ಯವಹಾರ ನಡೆಸಿದ್ದು, 609.85 ಲಕ್ಷ ರೂ. ಲಾಭ ಗಳಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ನಿರ್ದೇಶಕರಾದ ನರಸಿಂಹ ಕಾಮತ್, ಬಿ.ಸುಧಾಕರ ರೈ ಮೊದಲಾದವರು ಉಪಸ್ಥಿತರಿದ್ದರು.