ಜೂ.22: ಎಸ್ಸೆಸ್ಸೆಫ್ ’ಸೌಹಾರ್ದ ನಡಿಗೆ’ಗೆ ಮೈಸೂರಿನಲ್ಲಿ ಚಾಲನೆ
ಮಂಗಳೂರು, ಜೂ.21: ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಡಿನ ಸೌಹಾರ್ದತೆಯ ಪರಂಪರೆಯನ್ನು ಉಳಿಸಲು ’ಮನುಷ್ಯ ಮನಸ್ಸುಗಳನ್ನು ಪೋಣಿಸುವ’ಎಂಬ ಧ್ಯೇಯದೊಂದಿಗೆ ಎಸೆಸ್ಸೆಫ್ ರಾಜ್ಯದ ಇಪ್ಪತ್ತು ಜಿಲ್ಲಾ ಕೇಂದ್ರಗಳಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರಮುಖ ಸ್ವಾಮೀಜಿಗಳು, ಕ್ರೈಸ್ತ ಫಾದರ್ಗಳು ಹಾಗೂ ಮುಸ್ಲಿಂ ಧರ್ಮಗುರುಗಳನ್ನು ಒಳಗೊಂಡು ನಾಡಿನ ಭಾವೈಕ್ಯತೆಯನ್ನು ಬಯಸುವ ಎಲ್ಲರೂ ಒಟ್ಟಾಗಿ ಕೈಕೈ ಹಿಡಿದುಕೊಂಡು ಪ್ರಮುಖ ಪಟ್ಟಣಗಳ ಮುಖ್ಯ ರಸ್ತೆಯಲ್ಲಿ ನಡೆಯುವುದು, ಕೊನೆಗೆ ಎಲ್ಲಾ ಧರ್ಮ ಗುರುಗಳು ಸೌಹಾರ್ದತೆಯ ಸಂದೇಶ ನೀಡಿ ಕಾರ್ಯಕ್ರಮ ಕೊನೆಗೊಳಿಸಲಾಗುತ್ತದೆ.
ಯಾವುದೇ ಧ್ವಜಗಳಿಲ್ಲದೆ, ಘೋಷಣೆ ಕೂಗದೆ ಮೌನವಾಗಿ ಭಾವೈಕ್ಯತೆಯ ಸಂದೇಶ ಸಾರುವ ಈ ಸೌಹಾರ್ದ ನಡಿಗೆಗೆ ಜೂ.22 ರಂದು ಪೂ.11ಕ್ಕೆ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ರಾಜ್ಯದ 20 ಪ್ರಮುಖ ಜಿಲ್ಲೆಗಳಿಗೆ ತೆರಳಿದ ಬಳಿಕ ಜುಲೈ 4ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ಹಿಕಮಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಕೋಶಾಧಿಕಾರಿ ಇರ್ಷಾದ್ ಹಾಜಿ ಯಾತ್ರೆಗೆ ನೇತೃತ್ವ ನೀಡಲಿದ್ದಾರೆ ಎಂದು ಎಸ್ಸೆಸ್ಸೆಫ್ ಪ್ರಕಟನೆ ತಿಳಿಸಿದೆ.