ಬ್ಯಾರಿ ಅಕಾಡಮಿಯಿಂದ ಬ್ಯಾರಿ ಸಾಹಿತ್ಯ ಕಮ್ಮಟ
ದೇರಳಕಟ್ಟೆ, ಜ.22: ಆಧುನಿಕ ಶಿಕ್ಷಣ ಮತ್ತು ವಿವಿಧ ಆಕರ್ಷಣೆಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಯುವಜನರಲ್ಲಿ ಮಾನಸಿಕ ಒತ್ತಡಗಳು ಜಾಸ್ತಿಯಾಗುತ್ತಿವೆ ಹಾಗೂ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಿವೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಸಹಯೋಗದೊಂದಿಗೆ ಕಣಚೂರು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಬ್ಯಾರಿ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭವ್ಯ ಪರಂಪರೆಯಿರುವ ಬ್ಯಾರಿ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ವಿದ್ಯಾರ್ಥಿ ಯುವಜನರು ಕೈಜೋಡಿಸಬೇಕು. ಬ್ಯಾರಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಯುವಜನರು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಉಮರ್ ಯು. ಎಚ್. ಮನವಿ ಮಾಡಿದರು.
ಅತಿಥಿಗಳಾಗಿ ಕಣಚೂರು ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕಣಚೂರು ಅಕಾಡಮಿ ಆಫ್ ಜನರಲ್ ಎಜುಕೇಶನ್ನ ಟ್ರಸ್ಟಿ ಉಮಯ್ಯ ಬಾನು, ಬ್ಯಾರಿ ಅಕಾಡಮಿಯ ಸದಸ್ಯ ಹಮೀದ್ ಹಸನ್ ಮಾಡೂರು ಭಾಗವಹಿಸಿದ್ದರು.
ಲೇಖಕಿ ಶಮೀಮಾ ಕುತ್ತಾರ್ ಸಂಪನ್ಮೂಲ ವ್ಯಕ್ತಿಯಾಗಿ ಕಮ್ಮಟ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಮರಿಯಂ ನಿಯಾಫಾ ಸ್ವಾಗತಿಸಿದರು. ಆಯಿಶತ್ ನಾದಿಯಾ ವಂದಿಸಿದರು. ಹಿಸ್ನಾ ನಿಯಾಫ್ ಕಾರ್ಯಕ್ರಮ ನಿರೂಪಿಸಿದರು.