ದೇರಳಕಟ್ಟೆ ಫಾದರ್ ಮುಲ್ಲರ್ ನಲ್ಲಿ ನ.4, 5ರಂದು 'ಪ್ರೇರಣಾ-23' ಹೋಮಿಯೋಪಥಿ ಫೆಸ್ಟ್, ರಾಷ್ಟ್ರ ಮಟ್ಟದ ಹೋಮಿಯೋಪಥಿ ಸಮ್ಮೇಳನ
ಕೊಣಾಜೆ, ನ.2: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ದಕ್ಷಿಣ ಭಾರತ ಹೋಮಿಯೋಪಥಿ ಫೆಸ್ಟ್ ಮತ್ತು 26 ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 'ಪ್ರೇರಣಾ -23' ನ.4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ ಎಂದು ಫಾಧರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಸದ್ದಾಮ್ ನವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
'ಪ್ರೇರಣಾ -23' ನಲ್ಲಿ ಒಟ್ಟು 10 ಸ್ಪರ್ಧೆಗಳು ನಡೆಯಲಿದ್ದು, ದಕ್ಷಿಣ ಭಾರತದ ಸುಮಾರು 16 ಕಾಲೇಜುಗಳಿಂದ 525 ಹೋಮಿಯೋಪಥಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಹಾಗೂ ವಿಜೇತರಿಗೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ಬಹುಮಾನ ನೀಡಲಾಗುವುದು ಎಂದರು.
ಈ ಹೋಮಿಯೋ ಫೆಸ್ಟ್ ವಿವಿಧ ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಪದವಿ ಪೂರ್ವ ವಿದ್ಯಾರ್ಥಿಗಳಲ್ಲಿ ಪಠ್ಯ ಮತ್ತು ಪಠ್ಯೇತರ ಪ್ರತಿಭೆಗಳನ್ನು ಬಿಂಬಿಸಲು ಒಂದು ವೇದಿಕೆಯಾಗಿದ್ದು, ಹೋಮಿಯೋಪಥಿ ಭಾತೃತ್ವದ ಸಾಂಸ್ಕೃತಿಕ ಶಕ್ತಿಯನ್ನು ಪ್ರದರ್ಶಿಸುವ ದಿನವಾಗಿದೆ ಎಂದರು.
ನ.5 ರಂದು ಹೋಮಿಯೋಪಥಿ ಸಮ್ಮೇಳನ:
26ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವು ನ.5 ರಂದು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಸುಮಾರು 720 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ವೈಜ್ಞಾನಿಕ ಅವಧಿಯಲ್ಲಿ ಡಾ.ಮನುಸ್ ಹೋಮಿಯೋಪಥಿಯ ಸಂಸ್ಥಾಪಕ, ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕರ ಮನು ಹೆರಿಂಗ್ಸ್ ಲಾ ಆಫ್ ಕ್ಯೂರ್ ಅನ್ನು ಪ್ರಸ್ತುತಪಡಿಸಲಿರುವರು. ಕೊಲ್ಕತ್ತಾ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಮತ್ತು ಆಡಳಿತಾಧಿಕಾರಿ ಡಾ.ರಜತ್ ಚಟ್ಟೋಪಾಧ್ಯಾಯರು ಸಾಕ್ಷ ಆಧಾರಿತ ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಲಿರುವವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಝೀನ್ ಬಿಡುಗಡೆ ಮಾಡಿ ಕವರ್ ಡಿಸೈನ್ ಸ್ಪರ್ಧೆಯ ವಿಜೇತ ರನ್ನು ಸನ್ಮಾನಿಸಲಾಗುವುದು. ಹಾಗೂ ಫಾಧರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಸ್ಯೂಟಿಕಲ್ ವಿಭಾಗದಲ್ಲಿ ತಯಾರಾದ ಹೊಸ ಹೋಮಿಯೋಪಥಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ನಿವೃತ್ತ ಪ್ರೊಫೆಸರ್ ಡಾ.ಶ್ರೀನಾಥ್ ರಾವ್ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭ ಅಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಶಾಸ್ತ್ರೀಯ ಕರ್ನಾಟಕ ಸಂಗೀತಗಾರ ಡಾ.ನಾರಾಯಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮ್ಮೇಳನದ ಸ್ಮರಣಿಕೆ ಬಿಡುಗಡೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಹೋಮಿಯೋಪಥಿ ಫೆಸ್ಟ್ ಹಾಗೂ ಫೋಸ್ಟರ್ ಪ್ರೆಸೆಂಟೇಶನ್ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಫಾ.ಅಶ್ವಿನ್ ಕ್ರಾಸ್ತಾ, ಪ್ರಾಂಶುಪಾಲ ಡಾ.ಪ್ರಭುಕಿರಣ್, ಉಪ ಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಅಮಿತಾ ಬಾಳಿಗಾ, ಸಂಯೊಜಕ ಡಾ.ರಖಾಲ್ ಪಿ., ಮಾಧ್ಯಮ ಸಮಿತಿಯ ಡಾ.ಅನುಷಸ ಜಿ.ಎಸ್., ಡಾ.ಜಿನೋ, ಡಾ.ಧೀರಜ್ ಮೊದಲಾದವರು ಉಪಸ್ಥಿತರಿದ್ದರು.