×
Ad

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲೂ ‘ಆ್ಯಂಬುಲೆನ್ಸ್’ ಸೇವೆ: ಉಳ್ಳಾಲ ಮೀನುಗಾರರ ಹೊಸ ಪ್ರಯತ್ನ

Update: 2026-02-04 00:28 IST

ಮಂಗಳೂರು, ಫೆ. 3: ರಸ್ತೆ ಅಪಘಾತಗಳು ಅಥವಾ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭ ಆ್ಯಂಬುಲೆನ್ಸ್‌ಗಳು ಸೈರನ್ ಮೊಳಗಿಸುತ್ತಾ ಧಾವಿಸಿ ಜೀವ ರಕ್ಷಣೆ ಮಾಡುವ ದೃಶ್ಯ ಸಾಮಾನ್ಯ. ಆದರೆ ಸಮುದ್ರ ಮಧ್ಯೆ ಅನಾಹುತ ಸಂಭವಿಸಿದಾಗ ಗಾಯಾಳುಗಳನ್ನು ತಕ್ಷಣ ದಡಕ್ಕೆ ತಲುಪಿಸುವ ವ್ಯವಸ್ಥೆಯ ಕೊರತೆಯಿಂದ ಅನೇಕ ಜೀವಹಾನಿ ಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ಮಂಗಳೂರಿನ ಉಳ್ಳಾಲದ ಮೀನುಗಾರರು ರಾಜ್ಯದಲ್ಲೇ ಮೊದಲ ಬಾರಿಗೆ ‘ಬೋಟ್ ಆ್ಯಂಬುಲೆನ್ಸ್’ ಸೇವೆ ಆರಂಭಿಸಿ ಗಮನ ಸೆಳೆದಿದ್ದಾರೆ.

ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್‌ ಟ್ ಮೀನುಗಾರರ ಸಂಘದ ವತಿಯಿಂದ ಈ ತುರ್ತು ಬೋಟ್ ಸೇವೆ ಆರಂಭಗೊಂಡಿದೆ. ಸಮುದ್ರದಲ್ಲಿ ದೋಣಿ ಮಗುಚುವುದು, ಬೆಂಕಿ ಅವಘಡಗಳು ಸಂಭವಿಸುವುದು ಅಥವಾ ಮೀನುಗಾರರಿಗೆ ಹಠಾತ್ ಅನಾರೋಗ್ಯ ಉಂಟಾಗುವ ಸಂದರ್ಭಗಳಲ್ಲಿ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ದಡಕ್ಕೆ ತಲುಪಿಸುವುದು ಇದರ ಉದ್ದೇಶ. ಕರಾವಳಿ ಭಾಗದಲ್ಲಿ ಸೀ ಆ್ಯಂಬುಲೆನ್ಸ್ ಅಗತ್ಯವಿದೆ ಎಂಬ ಬೇಡಿಕೆ ದಶಕಗಳಿಂದ ಕೇಳಿಬರುತ್ತಿದ್ದರೂ, ತಾಂತ್ರಿಕ ಹಾಗೂ ಆರ್ಥಿಕ ಕಾರಣಗಳಿಂದ ಸರ್ಕಾರದ ಯೋಜನೆ ಜಾರಿಯಾಗಿರಲಿಲ್ಲ. ಸರ್ಕಾರದ ನೆರವಿಗೆ ಕಾಯದೆ ಮೀನುಗಾರರೇ ಒಗ್ಗೂಡಿ ಈ ಸೇವೆಯನ್ನು ಆರಂಭಿಸಿರುವುದು ವಿಶೇಷವಾಗಿದೆ.

ವಿಶೇಷ ವಿನ್ಯಾಸದಲ್ಲಿ ಸಿದ್ಧಪಡಿಸಿದ ಬೋಟ್‌ ನಲ್ಲಿ ಸೈರನ್, ಕೆಂಪು ಎಚ್ಚರಿಕೆ ದೀಪಗಳು, ಸ್ಟ್ರೆಚರ್, ಆಮ್ಲಜನಕ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಲೈಫ್ ಜಾಕೆಟ್‌ ಗಳನ್ನು ಅಳವಡಿಸಲಾಗಿದೆ. ಸೈರನ್ ಶಬ್ದ ಕೇಳುತ್ತಿದ್ದಂತೆಯೇ ಇತರೆ ದೋಣಿಗಳು ದಾರಿ ಬಿಡುವಂತೆ ವ್ಯವಸ್ಥೆ ಮಾಡಲಾಗಿದೆ. ಮೈಕ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯೂ ಇದ್ದು, ತೀರ ಪ್ರದೇಶದವರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ.

ಸೇವೆಯ ನಿರ್ವಹಣೆಗೆ ಮೂವರು ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ಸಮುದ್ರದ ಕಠಿಣ ಪರಿಸ್ಥಿತಿಗಳಲ್ಲೂ ಈಜಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ದೋಣಿಗಳು ಮಗುಚಿದ ಸಂದರ್ಭಗಳಲ್ಲಿ ಉಸಿರಾಟದ ತೊಂದರೆಯಿಂದ ಸಂಭವಿಸುವ ಸಾವುಗಳನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೋಟ್‌ ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಶೀಘ್ರವಾಗಿ ದಡಕ್ಕೆ ತಲುಪಿಸಲು ಸಾಧ್ಯವಾಗುತ್ತಿದೆ.

ಪ್ರಸ್ತುತ ಒಂದು ಬೋಟ್ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಆರ್ಥಿಕ ನೆರವು ದೊರೆತಲ್ಲಿ ಇನ್ನಷ್ಟು ಆಧುನಿಕ ಉಪಕರಣಗಳನ್ನು ಅಳವಡಿಸಿ ಜಿಲ್ಲೆಯಾದ್ಯಂತ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಮೀನುಗಾರರ ಸಂಘ ಹೊಂದಿದೆ. ಕರಾವಳಿ ಭಾಗದ ಜೀವ ರಕ್ಷಣೆಯಲ್ಲಿ ಈ ಪ್ರಯತ್ನ ಮಾದರಿಯಾಗಿದೆ.

 Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News