ಕಮಲಾಪುರ: ಮೂವರು ಸಾಧಕರಿಗೆ 'ಕಳ್ಳಿಮಠದ ಕಲ್ಪವೃಕ್ಷ' ಪ್ರಶಸ್ತಿ ಪ್ರದಾನ
ಕಲಬುರಗಿ: ಕಮಲಾಪುರ ತಾಲ್ಲೂಕಿನ ಮಹಾಗಾಂವ ಸೇರಿದಂತೆ ಸುತ್ತಲಿನ ಗ್ರಾಮಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಳ್ಳಿಮಠದ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಮಹಾಗಾಂವ ವಿರೂಪಾಕ್ಷ ಶಿವಾಚಾರ್ಯ 46 ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದಿನ ಗುರುಲಿಂಗ ಶಿವಾಚಾರ್ಯರು ತಾವು ಕಂತಿ ಭೀಕ್ಷೆ ಮಾಡಿ ಬಡ ಮಕ್ಕಳಿಗೆ ಊಟ ಮಾಡಿಸಿ ತಮ್ಮ ಮಠದಲ್ಲಿ ಉಚಿತ ಶಿಕ್ಷಣ ನೀಡಿದ ಅನೇಕರು ಇಂದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ನಮ್ಮ ಭಾಗದ ಸಾಂಸ್ಕೃತಿಕ, ಶೈಕ್ಷಣಿಕ ಪ್ರಗತಿಯೊಂದಿಗೆ ಧಾರ್ಮಿಕ, ನೈತಿಕ ಮೌಲ್ಯಗಳನ್ನು ಬಿತ್ತಿದ್ದಾರೆ ಎಂದರು.
ಮಾಜಿ ಎಂಎಲ್ಸಿ ಅಮರನಾಥ ಪಾಟೀಲ ಮಾತನಾಡಿ, ಮಠಗಳು, ಮಠಾಧೀಶರು ಸಮಾಜೋದ್ಧಾರದ ಕಾರ್ಯದಲ್ಲಿ ತೊಡಗಿರಬೇಕು. ಕಳ್ಳಿಮಠ ಹಿಂದಿನಿಂದಲೂ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.
ಸಾಹಿತಿ ಶರಣಬಸಪ್ಪ ವಡ್ಡನಕೇರಿ, ಶಾಂತಾಬಾಯಿ ಮುಗಳಿ, ಅರುಣಾದೇವಿ ಹತ್ತಿ ಅವರಿಗೆ 'ಕಳ್ಳಿಮಠದ ಕಲ್ಪವೃಕ್ಷ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಕ ಅಂಬಾರಾಯ ಮಡ್ಡೆಯವರ ಸಂಪಾದನೆಯ 'ಮಹಾಗಾಂವ ಕಳ್ಳಿಮಠ ಶ್ರೀಗಳ ಭಜನಾಪದಗಳು' ಪುಸ್ತಕ ಬಿಡುಗಡೆ ಮಾಡಲಾಯಿತು.
ಬಬಲಾದ ಗುರುಪಾದಲಿಂಗ ಶಿವಯೋಗಿ, ಪಾಳಾದ ಗುರುಮೂರ್ತಿ ಶಿವಾಚಾರ್ಯ, ಕಳ್ಳಿಮಠದ ವಿರೂಪಾಕ್ಷ ದೇವರು, ಅಮಿನಗಡದ ಶಿವಾನಂದ ಶಿವಾಚಾರ್ಯ, ಮಂಗಲಗಿಯ ಶಾಂತ ಸೋಮನಾಥ ಶಿವಾಚಾರ್ಯ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ, ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮುಖಂಡರಾದ ಜಯಶ್ರೀ ಮತ್ತಿಮಡು, ಮಲ್ಲಿಕಾರ್ಜುನ ಮರತೂರ, ಪಿಕೆಪಿಎಸ್ ಅಧ್ಯಕ್ಷ ರಾಜಶೇಖರ ಚಿಂಚೋಳಿ, ಸಾಹಿತಿ ಮಲ್ಲಮ್ಮ ಕಾಳಗಿ, ಕಸ್ತೂರಿಬಾಯಿ ಮಾಲಿಪಾಟೀಲ, ಶಿವರಾಜ ಅಂಡಗಿ, ಶ್ರೀಕಾಂತ ಪಾಟೀಲ, ಎಮ್.ಸಿ.ಕೋರಿಶೆಟ್ಟಿ, ಸಿದ್ದಲಿಂಗಯ್ಯ ಕಳ್ಳಿಮಠ, ಶಿವಯೋಗಿ ಕಳ್ಳಿಮಠ ಮತ್ತಿತರರು ಹಾಜರಿದ್ದರು,