ಶಿಕ್ಷಣವನ್ನು ಕೆಲವರ ಸ್ವತ್ತಾಗಿಸಲು ಸರ್ಕಾರ ಹುನ್ನಾರ ನಡೆಸಿದೆ: ತುಳಜಾರಾಮ
ಕಲಬುರಗಿ: ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಕ್ರಾಂತಿಕಾರಿ ಭಗತ್ ಸಿಂಗ್, ನೇತಾಜಿಯಂತಹವರ ಆಶಯವಾದ ಸಾರ್ವಜನಿಕ ಶಿಕ್ಷಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ವ್ಯಾಪಾರಕ್ಕಿಟ್ಟಿದೆ ಎಂದು ಎಐಡಿಎಸ್ಒ ಸಂಘಟನೆಯ ಜಿಲ್ಲಾ ಅಧ್ಯಕ್ಷ ತುಳಜಾರಾಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಹಾಬಾದ್ ನ ಎಐಡಿಎಸ್ಒ ಕಚೇರಿಯಲ್ಲಿ ಸಂಘಟನೆಯ 72ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯ ಮೂಲಕ ದುಡಿಯುವ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರದಿಂದ ಶಿಕ್ಷಣವನ್ನು ಖಾಸಗಿಯವರ ಮಡಿಲಿಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮೂಲಕ ಶಾಶ್ವತವಾಗಿ ಬಡ ಮಕ್ಕಳಿಗಿರುವ ಜ್ಞಾನದ ಬಾಗಿಲನ್ನು ಮುಚ್ಚಿ, ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಕ್ರಾಂತಿಕಾರಿಗಳ ಹೋರಾಟ, ಸಂಘರ್ಷಗಳ ಫಲವಾಗಿ ದೊರೆತ ಈ ಶಿಕ್ಷಣದ ಹಕ್ಕನ್ನು ಕಸಿದು, ಕೇವಲ ಕೆಲವೇ ಜನರ ಸ್ವತ್ತಾಗಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಕೆಪಿಎಸ್ - ಮ್ಯಾಗ್ನೆಟ್ ಯೋಜನೆಯನ್ನು ಧಿಕ್ಕರಿಸುವಂತಾಗಿದೆ. ರಾಜ್ಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಮುಂಬರಬೇಕು ಎಂದು ಕೆರೆ ನೀಡಿದರು.
ಸಂಘಟನೆಯ ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರುಜಲಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಬು ಪವರ್ , ದೇವರಾಜ , ಅಜಯ್ ಗುರುಜಲಕರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಸೃಷ್ಟಿ , ಬೃಂದಾ , ಬಿಂದು ಮತ್ತು ವಿದ್ಯಾರ್ಥಿಗಳಾದ ಅಂಬಿಕಾ, ಪ್ರಜ್ವಲ್, ಪ್ರಶಾಂತ್ , ಭೀಮಾಶಂಕರ ಸೇರಿದಂತೆ ಹಲವರು ಇದ್ದರು.