ಕೊಣಾಜೆ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮೇಶ್ವರದ ಕೆರೆಯಲ್ಲಿ ಪತ್ತೆ
ಉಳ್ಳಾಲ: ಕಳೆದ ಸೋಮವಾರದಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೋರ್ವನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ವಿವೇಕ್ ಶೆಟ್ಟಿಗಾರ್ ( 32)ಮೃತ ಯುವಕ.
ಮಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು, ವಿವೇಕ್ ಕರೆಯನ್ನ ಸ್ವೀಕರಿಸಿರಲಿಲ್ಲ.
ವಿವೇಕ್ ಮಂಗಳವಾರವೂ ಮನೆಗೂ ಬಾರದೆ, ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಡಿದ್ದು,ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿವೇಕ್ ಅವರ ದ್ವಿಚಕ್ರ ವಾಹನದ ಜೊತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲಕಿನಾರೆಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.
ಮೃತ ವಿವೇಕ್ ವಿವಾಹಿತನಾಗಿದ್ದು, ಪತ್ನಿ ಆತನಿಂದ ವಿಚ್ಚೇದನ ಪಡೆದಿದ್ದಳು ಎನ್ನಲಾಗಿದೆ. ಇದೇ ವಿಚಾರದಲ್ಲಿ ವಿವೇಕ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ.
ಮೃತ ವಿವೇಕ್ ತಂದೆ,ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ.