ಆ.28ರ ‘ಚಲೋ ಬೆಳ್ತಂಗಡಿ’ ಯಶಸ್ವಿಗೆ ಸಮಾನ ಮನಸ್ಕರ ಒಕ್ಕೂಟ ಮನವಿ
ಮಂಗಳೂರು, ಆ.23: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ಆ.28ರಂದು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಯುವ ‘ಚಲೋ ಬೆಳ್ತಂಗಡಿ’ ಧರಣಿ ಮತ್ತು ಸಮಾವೇಶ ವನ್ನು ಯಶಸ್ವಿಗೊಳಿಸುವಂತೆ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಬಿಐ ನ್ಯಾಯಾಲಯದ ತೀರ್ಪಿನ ಬಳಿಕ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳು ನಾಗರಿಕರನ್ನು ಬಲಗೊಳಿಸಿದೆ. ಈಗಾಗಲೆ ಜನಾಕ್ರೋಶ ಭುಗಿಲೆದ್ದಿದ್ದು ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ ರಾಜ್ಯ ಸರಕಾರವು ಸೌಜನ್ಯಾ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು. 1987ರಲ್ಲಿ ನಡೆದ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಮತ್ತಾತನ ಸೋದರಿ ಯಮುನಾ ಸಹಿತ ಧರ್ಮಸ್ಥಳ, ಉಜಿರೆ ಪರಿಸರದಲ್ಲಿ ನಡೆದಿರುವ ಕೊಲೆ, ಅಸಹಜ ಸಾವುಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ, ಮಹಾ ಧರಣಿ’ಯಲ್ಲಿ ದ.ಕ.ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಪಾಲ್ಗೊಳ್ಳಲಿವೆ. ಬೆಳಗ್ಗೆ 10ರಿಂದ ಸಂಜೆಯವರೆಗೆ ನಡೆಯುವ ಧರಣಿಯಲ್ಲಿ ನಾಡಿನ ಸಾಹಿತಿ ಗಳು, ಚಿಂತಕರು, ಹೋರಾಟಗಾರರ ಸಹಿತ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದರು.
ಸೌಜನ್ಯಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಜನಪರ ಮತ್ತು ಸಮಾನ ಮನಸ್ಕ ಸಂಘಟನೆಗಳು ಆ.28ರಂದು ಆಯೋಜಿಸಿದ ‘ಚಲೋ ಬೆಳ್ತಂಗಡಿ’ಯ ದಿಕ್ಕು ತಪ್ಪಿಸುವ ಸಲುವಾಗಿ ಬಿಜೆಪಿಗರು ಆ.27ರಂದು ಬೆಳ್ತಂಗಡಿ ಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸ್ಪಷ್ಟ. ಸೌಜನ್ಯಾ ಕುಟುಂಬಕ್ಕೆ ನ್ಯಾಯ ಕೊಡಿಸಲು ಬಿಜೆಪಿಗರಿಗೆ ಆಸಕ್ತಿ ಇದ್ದರೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಸೌಜನ್ಯ ಪ್ರಕರಣ ನಡೆದಾಗಲೇ ಬೃಹತ್ ಪ್ರತಿಭಟನೆಗಳು ನಡೆದಿತ್ತು. ಜನಾಗ್ರಹವನ್ನು ಪರಿಗಣಿಸಿ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ ನ್ಯಾಯಾಲಯದ ತೀರ್ಪಿನ ಬಳಿಕ ಜನರು ಸಿಬಿಐ ಮೇಲಿನ ನಂಬಿಕೆಯನ್ನು ಕಳಕೊಂಡಿದ್ದಾರೆ. ಸಿಬಿಐ ಪ್ರಭಾವಿಗಳ ಒತ್ತಡಕ್ಕೆ ಬಲಿಯಾಗಿವೆ ಎಂಬ ಆರೋಪ ವ್ಯಕ್ತವಾಗಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಬಿಐ ಬೇಡ, ರಾಜ್ಯದ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ತನಿಖೆ ನಡೆಸಲಿ ಎಂಬ ಆಗ್ರಹ ಕೇಳಿ ಬಂದಿವೆ. ಹಾಗಾಗಿ ಸತ್ಯ ಸಂಗತಿ ಬಹಿರಂಗಗೊಳ್ಳಬೇಕಿವೆ. ಅದಕ್ಕಾಗಿ ಪತ್ತೆಯಾಗದ ಕೊಲೆ, ಅಸಹಜ ಸಾವುಗಳ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ನಾಯಕರಾದ ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೋಗರು, ಬಿ. ಕೆ. ಇಮ್ತಿಯಾಝ್, ಜೆ.ಬಾಲಕೃಷ್ಣ ಶೆಟ್ಟಿ, ಬಿ.ಶೇಖರ್, ಸೀತಾರಾಮ ಬೇರಿಂಜ, ದಲಿತ ಸಂಘಟನೆಗಳ ಮುಖಂಡರಾದ ಎಂ. ದೇವದಾಸ್, ಕೃಷ್ಣ ತಣ್ಣೀರುಬಾವಿ, ರೈತ ಸಂಘದ ಮುಖಂಡರಾದ ಕೃಷ್ಣಪ್ಪಸಾಲಿಯಾನ್, ಪ್ರೇಮನಾಥ್ ಶೆಟ್ಟಿ, ಯುವಜನ ನಾಯಕರಾದ ಸಂತೋಷ್ ಬಜಾಲ್, ಜಗತ್ಪಾಲ್, ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಪ್ರಶಾಂತ್,ಭಾರತಿ ಬೋಳಾರ ಉಪಸ್ಥಿತರಿದ್ದರು.