ಮಂಗಳೂರು ಜೈಲಿನಲ್ಲಿ ಬೀಡಿಗಾಗಿ ಕೂಗಾಟ: 8 ಮಂದಿ ಕೈದಿಗಳ ವಿರುದ್ಧ ಪ್ರಕರಣ ದಾಖಲು
ಫೈಲ್ ಫೋಟೊ
ಮಂಗಳೂರು, ಮಾ.6: ನಗರದ ಜೈಲಿನಲ್ಲಿ ಬೀಡಿ ಬೇಕು ಎಂದು ಕೂಗಾಡಿ ದಾಂಧಲೆ ಎಸಗಿದ ಘಟನೆ ಬುಧವಾರ ನಡೆದಿದ್ದು, ಈ ಬಗ್ಗೆ ಜೈಲು ಅಧೀಕ್ಷಕ ಶರಣಬಸಪ್ಪ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ವಿಚಾರಣಾಧೀನ ಕೈದಿ ಪ್ರದೀಪ ಪೂಜಾರಿ ಎಂಬಾತ ಕಚೇರಿಯ ಮುಂದೆ ಬಂದು ಜೋರಾಗಿ ಕೂಗಾಡುತ್ತಾ ಕಬ್ಬಿಣದ ಸರಳುಗಳಿಗೆ ಬಡಿಯುತ್ತಾ ಕಲ್ಲನ್ನು ಎಸೆಯುತ್ತ ತನಗೆ ಬೀಡಿ ಬೇಕು ಎಂದು ಗಲಾಟೆ ಮಾಡತೊಡಗಿದ. ತಕ್ಷಣ ತಾನು ಬುದ್ಧಿವಾದ ಹೇಳಿದರೂ ಕೇಳದೆ ಕಚೇರಿಗೆ ನುಗ್ಗಿ ದಾಂಧಲೆ ಮಾಡಲು ಪ್ರಯತ್ನಿಸಿದ. ಆವಾಗ ಕರ್ತವ್ಯ ನಿರತ ಸಿಬ್ಬಂದಿ ಪ್ರದೀಪ ಪೂಜಾರಿಯನ್ನು ತಡೆದರು. ಬಳಿಕ ಎಲ್ಲಾ ಕೈದಿಗಳನ್ನು ಎ ಮತ್ತು ಬಿ ವಿಭಾಗಗಳ ಹತ್ತಿರ ಕರೆದುಕೊಂಡು ಹೋಗಿ ಅವರಿರುವ ಕೊಠಡಿಗಳಿಗೆ ಹೋಗುವಂತೆ ತಿಳಿಸಿದರೂ ಕೇಳಲಿಲ್ಲ. ಪ್ರದೀಪ ಪೂಜಾರಿಯ ಜೊತೆ ಸಯ್ಯದ್, ಅರ್ಫಾಝ್, ಇಮ್ರಾನ್ ಯಾನೆ ಇಂಭಾ, ಆಫ್ರೀದ್, ಶೇಖ್ ತಹೀಮ್, ವಾಜಿದ್ ಯಾನೆ ವಾಜಿ, ನಾಸೀರ್ ಯಾನೆ ಶಾಖಿರ್ ಯಾನೆ ಚಾಕಿ ಕೂಡ ಸೇರಿಕೊಂಡು ಸೇದಲು ಬೀಡಿ ಕೊಡದಿದ್ದರೆ ನಾವು ಕೊಠಡಿಗಳಿಗೆ ಹೋಗುವುದಿಲ್ಲ ಎಂದು ಜೋರಾಗಿ ಕೂಗಾಡಿ ಸಿಸಿಟಿವಿ ಕ್ಯಾಮರಾವನ್ನು ಮೇಲ್ಬಾಗದ ದಿಕ್ಕಿಗೆ ತಿರುಗಿಸಿ ಬೀಗಮುದ್ರೆ ಮಾಡದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಅಧೀಕ್ಷಕರು ದೂರಿನಲ್ಲಿ ತಿಳಿಸಿದ್ದಾರೆ.